ಹೊಸಪೇಟೆ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಪ್ರಾಚ್ಯವಸ್ತು ಇಲಾಖೆೆ, ಗಣಿ ಮತ್ತು ಭೂವಿಜ್ಞಾನ, ಪರಿಸರ ಹಾಗೂ ಐಬಿಎಂ (ಇಂಡಿಯನ್ ಬ್ಯೂರೊ ಆಫ್ ಮೈನ್ಸ್)ನ ಉನ್ನತಾಧಿಕಾರಿಗಳ ವಿಶೇಷ ತನಿಖಾ ತಂಡ ಐತಿಹಾಸಿಕ ಜಂಬುನಾಥಸ್ವಾಮಿ ದೇವಸ್ಥಾನದ ಹಾನಿಯ ಕುರಿತು ಪರಿಶೀಲನೆ ನಡೆಸಿತು.
ಸೋಮವಾರ ನಗರಕ್ಕೆ ಆಗಮಿಸಿದ ವಿವಿಧ ಇಲಾಖೆಗಳ 10 ಜನ ವಿಶೇಷಾಧಿಕಾರಿಗಳ ಸಮಿತಿಯ
ಸಂಚಾಲಕ ಹಾಗೂ ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್. ಗೋಪಾಲ ನೇತೃತ್ವದಲ್ಲಿ ಪರಿಶೀಲನೆ ನಡೆಸಿತು.
ಪ್ರಾಚ್ಯವಸ್ತು ಇಲಾಖೆಯ ಸಿದ್ಧನಗೌಡ, ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ನರಸಿಂಹನ್, ಗಣಿ ಇಲಾಖೆಯ ಉಪನಿರ್ದೇಶಕ ಡಾ.ಬಿ.ಎನ್. ಶಂಕರ, ಗಣಿ ಸುರಕ್ಷಾ ಇಲಾಖೆಯ ನಿರ್ದೇಶಕ ವಿ.ಲಕ್ಷ್ಮಿನಾರಾಯಣ, ಐಬಿಎಂನ ನಾಗಪುರ ವಲಯದ ಜಾಂಟೆ ಮತ್ತು ಎ.ಬಿ. ಮಾರೆಪ್ಪನವರ್ ಈ ಸಮಿತಿಯಲ್ಲಿದ್ದಾರೆ.
ಸಮಿತಿಯು ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನಕ್ಕೆ ಗಣಿಗಾರಿಕೆಯಿಂದ ಆಗುತ್ತಿರುವ ಹಾನಿಗಳನ್ನು ಪರಿಶೀಲಿಸಿತಲ್ಲದೆ ಸ್ಥಳೀಯರು, ಅರ್ಚಕರು ಮತ್ತು ದೇವಸ್ಥಾನ ಸಮಿತಿಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿತು.
ತನಿಖಾ ಸಮಿತಿಯ ಸಭೆ: ಸುಪ್ರೀಂ ಕೋರ್ಟ್ ರಚಿಸಿದ ಈ ಸಮಿತಿಯ ಮೊದಲ ಸಭೆ ನಗರದ ಹಂಪಿ ಪ್ರದೇಶಾಭಿವೃದ್ಧಿ ನಿರ್ವಹಣಾ ಪ್ರಾಧಿಕಾರದ ಸಭಾಂಗಣದಲ್ಲಿ ನಡೆಯಿತು.