ಯಲಬುರ್ಗಾ: ಕೇಂದ್ರ ಸರ್ಕಾರವೇ ಗಣಿಗಾರಿಕೆಗೆ ಅವಕಾಶಕೊಟ್ಟಿದ್ದನ್ನು ಮರೆತು ರಾಜ್ಯದಲ್ಲಿ ಗಣಿಗಾರಿಕೆಯಿಂದ ರೈಲ್ವೆ ಇಲಾಖೆಗೆ 1500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪನವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಸಂಸದ ಶಿವರಾಮಗೌಡ ಹೇಳಿದರು.
ಇಟಗಿ ಗ್ರಾಮದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸೇರಿದಂತೆ ವಿವಿಧೆಡೆ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದ ಕೇಂದ್ರ ಸರ್ಕಾರದ ದ್ವಂದ್ವ ನಿಲುವು ರಾಜ್ಯ ಹಾಗೂ ರಾಷ್ಟ್ರದಲ್ಲಿ ಅನೇಕ ರೀತಿಯ ನಷ್ಟಗಳಿಗೆ ಕಾರಣವಾಗಿದೆ. ಈ ಎಲ್ಲ ಸೂಕ್ಷ್ಮ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಸಚಿವರು ಮಾತನಾಡಿದರೆ ಒಳಿತು ಎಂದರು.
ಬಹು ನಿರೀಕ್ಷಿತ ಆಲಮಟ್ಟಿ-ಕೊಪ್ಪಳ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ, ಈಗಾಗಲೇ ಮೂರು ಹಂತದ ಸರ್ವೆ ಕಾರ್ಯಕ್ಕೆ ಚಾಲನೆ ದೊರೆತಿದೆ, ಇದನ್ನು ಹೊರೆತುಪಡಿಸಿದರೆ ಉಳಿದಂತೆ ರೈಲ್ವೆ ಅಭಿವೃದ್ಧಿಯಲ್ಲಿ ಯಾವುದೇ ಗಮನಾರ್ಹ ಪ್ರಗತಿ ಕಾಣುತ್ತಿಲ್ಲ, ಈ ಬಗ್ಗೆ ಹೋರಾಡುವುದಾಗಿ ಹೇಳಿದ ಸಂಸದರು, ಕೃಷ್ಣಾ ‘ಬಿ’ ಸ್ಕೀಂ ಯೋಜನೆ ಬಗೆಗಿನ ಮಾತುಗಳು ಬರೀ ಆಶ್ವಾಸನೆಗೆ ಸೀಮಿತವಾದಂತಾಗಿವೆ. ಅದು ಕಾರ್ಯಗತಗೊಳ್ಳಬೇಕಾ ದರೆ ಬಹಳಷ್ಟು ವರ್ಷಗಳು ಬೇಕಾಗುತ್ತದೆ. ಅದಕ್ಕಾಗಿ ಆ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಮುಖಂಡರ ಪಡೆಯೇ ಇದ್ದರೂ ನಿರೀಕ್ಷಿತ ಹಾಗೂ ಅಗತ್ಯಕ್ಕೆ ಬೇಕಾಗುವಷ್ಟು ಪಂಚಾಯಿತಿ ಸದಸ್ಯರನ್ನು ಗೆಲ್ಲಿಸಲಾಗದ ವಿಫಲತೆಗೆ ಪ್ರಮುಖವಾಗಿ ಮುಖಂಡರೆಲ್ಲರು ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆಮಾಡುವಲ್ಲಿ ವಿಫಲರಾಗಿದ್ದು ಹೆಚ್ಚಿನ ಸಂಖ್ಯೆಯ ಸದಸ್ಯರು ಆಯ್ಕೆಯಾಗದ್ದಕ್ಕೆ ಕಾರಣ. ಆದರೂ ಬಿಜೆಪಿ ಇತರ ಪಕ್ಷಕ್ಕಿಂತಲೂ ಹೆಚ್ಚಿನ ಮತಗಳು ಬಂದಿವೆ. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಬಿಜೆಪಿ ನೇತೃತ್ವದ ಆಡಳಿತ ಏರ್ಪಡಲಿದೆ ಎಂದರು.
ಬಿಜೆಪಿ ಮುಖಂಡರಾದ ಶಿವಣ್ಣ ಮುತ್ತಾಳ, ನವೀನ ಗುಳಗಣ್ಣವರ್, ವೀರಣ್ಣ ಹುಬ್ಬಳ್ಳಿ, ವಿರೂಪಾಕ್ಷಪ್ಪ ಹುಳ್ಳಿ, ಈಶಣ್ಣ ಗುಳಗಣ್ಣವರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುರೇಶ ಗೌಡ ಶಿವನಗೌಡ್ರ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.