ಬೆಂಗಳೂರು: `ಗಣಿತ ಈಗ ಕಬ್ಬಿಣದ ಕಡಲೆಯಾಗಿ ಉಳಿದಿಲ್ಲ. ಆದರೆ ತಜ್ಞ ಉಪನ್ಯಾಸಕರ ಕೊರತೆ ಪರಿಣಾಮ ಸಮಸ್ಯೆಯನ್ನು ಆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ' ಎಂದು ಜೋಧಪುರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಕೆ. ಬ್ಯಾನರ್ಜಿ ಅಭಿಪ್ರಾಯಪಟ್ಟರು.
ಆಚಾರ್ಯ ಪದವಿ ಅಧ್ಯಯನ ಸಂಸ್ಥೆಯು, ದಕ್ಷಿಣ ಕೋರಿಯಾದ ಜಾನ್ ಜಿಯಾನ್ ಗಣಿತ ಸೊಸೈಟಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ 26ನೇ ಅಂತರರಾಷ್ಟ್ರೀಯ ಗಣಿತಶಾಸ್ತ್ರ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಣಿತ ಶಾಸ್ತ್ರ ಅಧ್ಯಾಪಕರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಭವಿಷ್ಯದ ಕುರಿತು ಆತಂಕ ಉಂಟಾಗಿದೆ ಎಂದರು.
ಬಹುತೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರೇ ಪಾಠ ಮಾಡುತ್ತಿದ್ದು ಅವರಿಗೆ ವಿಷಯ ಆಧಾರಿತ ತಿಳಿವಳಿಕೆ ಕಡಿಮೆ ಇದೆ ಎಂದು ಹೇಳಿದರು.
ಪ್ರೊ.ಗುರುನಾಥ್ ರಾವ್ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಜಾನ್ ಜಿಯಾನ್ ಗಣಿತ ಸೊಸೈಟಿಯ ಅಧ್ಯಕ್ಷ ಕಿಂ, ಆಚಾರ್ಯ ಸಮೂಹ ಸಂಸ್ಥೆಗಳ ಅಧಿಕಾರಿ ಮಾಧವಿ ಶ್ರೀನಿವಾಸ್, ಮತ್ತಿತರರು ಭಾಗವಹಿಸಿದರು.