ಅದು ಪಾಳು ಕಾರ್ಖಾನೆ. ಒಳಹೊಕ್ಕವರ ಪ್ರಜ್ಞೆ ತಪ್ಪುತ್ತದೆ. ಇಂಥ ಕಾರ್ಖಾನೆಯಲ್ಲಿ ಸಿಕ್ಕಿಕೊಳ್ಳುವ ಆರು ಜನ ತಮ್ಮ ನೆನಪನ್ನು ಕಳೆದುಕೊಂಡು, ಉಳಿವಿಗಾಗಿ ಪರದಾಡುತ್ತಾರೆ. ಕೊನೆಯಲ್ಲಿ ಕಾರಣ ಹೊರಬೀಳುತ್ತದೆ. ಅದು `ಚಾಲೆಂಜ್~ ಚಿತ್ರದ ಕತೆ. ಇದೊಂದು ಕುತೂಹಲಕಾರಿ ಸಸ್ಪೆನ್ಸ್ ಚಿತ್ರ ಎನ್ನುವುದು ಚಿತ್ರತಂಡದ ಹೇಳಿಕೆ.
ಚೆನ್ನೈ ಮೂಲದ ನಿರ್ಮಾಪಕ, ನಿರ್ದೇಶಕರು ಕನ್ನಡ ಸಿನಿಮಾ ಮಾಡುವ ಮೂಲಕ ಅಕ್ಷರಶಃ `ಚಾಲೆಂಜ್~ ಸ್ವೀಕರಿಸುತ್ತಿರುವ ಸಿನಿಮಾ ಇದು. ಚಿತ್ರದ ಚಿತ್ರೀಕರಣ ಈಗಾಗಲೇ ಬೆಂಗಳೂರಿನ `ಮೈಸೂರು ಲ್ಯಾಂಪ್ಸ್~ ಪರಿಸರದಲ್ಲಿ ಆರಂಭವಾಗಿದೆ.
ನಿರ್ದೇಶಕ ಗಣೇಶ್ ಕಾಮರಾಜ್. ತಮಿಳಿನ `ಪೆರುಸು~, `ಸುತ್ತಪಳಂ~, `ವಿಲೈ~ ಸಿನಿಮಾ ನಿರ್ದೇಶಿಸಿದ ಅನುಭವ ಅವರಿಗಿದೆ.
ಒಂದು ವರ್ಷ ಸ್ಕ್ರಿಪ್ಟ್ ಕೆಲಸ ಮಾಡಿರುವ ಅವರು ಹರೀಶ್ ರಾಜ್, ದಿಲೀಪ್ ರಾಜ್, ಅಚ್ಯುತ್ ಕುಮಾರ್ ಅವರಂಥ ಉತ್ತಮ ಕಲಾವಿದರನ್ನು ಕಲೆಹಾಕಿದ್ದಾರೆ. `ಚಾಲೆಂಜ್~ನ ನಿರ್ಮಾಪಕ ಶ್ರೀಧರ್.
ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅಚ್ಯುತ ಕುಮಾರ್, `ನನ್ನದು ಗೆಳೆಯರ ಹಣದಲ್ಲಿ ಬದುಕು ನಡೆಸುವವನ ಪಾತ್ರ. ನಾನೂ ಕೂಡ ಕಾರ್ಖಾನೆಯಲ್ಲಿ ಪ್ರಜ್ಞೆ ತಪ್ಪುತ್ತೇನೆ. ಅದಕ್ಕೆ ಕಾರಣ ಕೊನೆಯಲ್ಲಿ ತಿಳಿಯುತ್ತದೆ~ ಎಂದರು.ನಾಯಕಿ ಸಂಜನಾ ಸಿಂಗ್ ಈಗಾಗಲೇ ತಮಿಳು ಸಿನಿಮಾದಲ್ಲಿ ನಟಿಸಿರುವ ಚೆಲುವೆ.
ಕಾಮರಾಜ್ ಅವರ ಆಹ್ವಾನದ ಮೇರೆಗೆ ಈ ಸಿನಿಮಾ ಒಪ್ಪಿಕೊಂಡಿದ್ದಾಗಿ ಹೇಳಿದರು. ನಾಯಕರಾದ ಹರೀಶ್ ರಾಜ್, ದಿಲೀಪ್ ರಾಜ್ ಸುದ್ದಿಗೋಷ್ಠಿ ಮುಗಿದರೂ ಪ್ರತ್ಯಕ್ಷರಾಗಲಿಲ್ಲ.