ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ವೈಭವಕ್ಕೆ ‘ವರುಣ’ನ ಅವಕೃಪೆ!

Last Updated 16 ಸೆಪ್ಟೆಂಬರ್ 2013, 8:23 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ಸರ್ಕಾರವು ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕುಂದಾ ನಗರಿಯ ಗಣೇಶೋತ್ಸವದ ಮೆರುಗನ್ನು ಹೆಚ್ಚಿಸಲು ಮುಂದಾಗಿತ್ತು. ಆದರೆ, ‘ವರುಣ’ನ ಅವಕೃಪೆಯಿಂದಾಗಿ ಗಣೇಶನ ವೈಭವಕ್ಕೆ ಆರಂಭದಲ್ಲೇ ‘ವಿಘ್ನ’ ಬಂದಂತಾಗಿದೆ.

ಗಣೇಶೋತ್ಸವ ಆರಂಭವಾದ ದಿನ ದಿಂದ ನಿತ್ಯ ಸಂಜೆ ಮಳೆಯಾಗುವ ಮೂಲಕ ಜನರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ. ‘ವರುಣ’ನ ಕೈಚಳಕ ದಿಂದಾಗಿ ಕಳೆದ ಆರು ದಿನಗಳ ಕಾಲ ಜನರು ಸಂಜೆ ಮನೆಯಿಂದ ಹೊರಗೆ ಕಾಲಿಡಲು ಮನಸ್ಸು ಮಾಡದಂತಹ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಪ್ರತಿಷ್ಠಾಪಿಸಿರುವ ವಿಘ್ನನಿವಾರಕನ ಪೆಂಡಾಲ್‌ಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಇನ್ನೊಂದೆಡೆ ಕುಮಾರ ಗಂಧರ್ವ ರಂಗಮಂದಿರದಲ್ಲಿ ಹಮ್ಮಿ ಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ವೀಕ್ಷಿಸಲು ಜನರು ಬಾರದೇ ಇರುವುದರಿಂದ ಖಾಲಿ ಕುರ್ಚಿಗಳೇ ಕಣ್ಣಿಗೆ ಕುಕ್ಕುತ್ತಿದ್ದವು! ಬೆಳಗಾವಿ ನಗರದ 400ಕ್ಕೂ ಹೆಚ್ಚಿನ ಗಣೇಶೋತ್ಸವ ಮಂಡಳಗಳು ಪ್ರತಿಷ್ಠಾಪಿಸಿ ರುವ ವಿಗ್ರಹಗಳು ಒಂದಕ್ಕಿಂತ ಒಂದು ಕಣ್ಮನ ಸೆಳೆಯು ತ್ತಿವೆ.

ಈ ವೈಭವವನ್ನು ಕಣ್ತುಂಬಿಕೊಳ್ಳಲು ಬೆಳಗಾವಿ ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಇಲ್ಲಿಗೆ ಆಗಮಿ ಸುತ್ತಾರೆ. ನಗರದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಜನರು ತಂಡೋಪ ತಂಡವಾಗಿ ಬರುತ್ತಿದ್ದರು. ಬೆಳಗಿನ ಜಾವ ಎರಡು ಗಂಟೆಯ ವರೆಗೂ ಜನಜಂಗುಳಿ ಇರುತ್ತಿತ್ತು.

ಹೀಗಾಗಿ ಇಲ್ಲಿನ ಗಣೇಶೋತ್ಸವದ ವೈಭವವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರವು ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು 1 ಕೋಟಿ ರೂಪಾಯಿ ವಿಶೇಷ ಅನು ದಾನವನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಿತ್ತು. ಸೆ. 10ರಿಂದ ಸಂಗೀತ, ನೃತ್ಯ ರೂಪಕ, ಜಾನಪದ ನೃತ್ಯ, ಜಾದೂ ಪ್ರದರ್ಶನ, ದೊಡ್ಡಾಟ ಪ್ರದರ್ಶನ ಕಾರ್ಯಕ್ರಮಗಳು ನಡೆದಿ ದ್ದವು. ಆದರೆ, ಮಳೆಯಿಂದಾಗಿ ಜನರು ಆಗಮಿಸಲು ಹಿಂದೇಟು ಹಾಕಿದ್ದಾರೆ.

‘ವರುಣ’ ಸ್ವಲ್ಪ ಮಟ್ಟಿಗೆ ಶಾಂತವಾಗಿ ರುವುದರಿಂದ ಶನಿವಾರ ರಾತ್ರಿಯಿಂದ ಗಣೇಶನ ವೀಕ್ಷಣೆಗಾಗಿ ಜನರು ಮನೆಯಿಂದ ಹೊರಗೆ ಬರ ತೊಡಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಬಿಡುವು ಮಾಡಿ ಕೊಂಡು ಬರುತ್ತಿದ್ದಾರೆ. ನಗರದ ಗಣೇಶ ಉತ್ಸವ ಮಂಡಳಗಳು ಪ್ರತಿಷ್ಠಾಪಿಸಿರುವ ರಾಧಾ– ಕೃಷ್ಣ ರೂಪಿ ಗಣಪ, ಹನುಮಂತನ ಹೆಗಲೇರಿದ ರಾಮನ ರೂಪಿ ವಿನಾಯಕ, ಬ್ರಹ್ಮ– ವಿಷ್ಣು– ಮಹೇಶ ಸ್ವರೂಪಿ ಗಣಪತಿ, ಕಾಳಿಂಗ ಮರ್ದನ ಅವತಾರಿ ಗಣಪ, ರಾಜಸ್ತಾನಿ ಶೈಲಿಯ ಗಣಪ.... ಹೀಗೆ ಬಗೆ ಬಗೆಯ ಗಣೇಶನ ಬೃಹತ್‌ ವಿಗ್ರಹಗಳು ಕಣ್ಮನ ಸೆಳೆ ಯುತ್ತಿವೆ.

ವೈವಿಧ್ಯಮಯ ವಿದ್ಯುತ್‌ ದೀಪಗಳ ಅಲಂಕಾರದಿಂದ ಮಂಟಪ ಗಳು ಕಂಗೊಳಿಸುತ್ತಿವೆ. ಸೆ. 19ರ ಬೆಳಿಗ್ಗೆವರೆಗೆ ಮಳೆಯಾಗದಿದ್ದರೆ, ಕನಿಷ್ಠ ಪಕ್ಷ ಕೊನೆಯ ನಾಲ್ಕು ದಿನಗಳಾದರೂ ಗಣೇಶನ ವೈಭವವನ್ನು ಜನರು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ. ಸೆ. 18ರಂದು ಸಂಜೆ 4 ಗಂಟೆಗೆ ನಗರದ ಹುತಾತ್ಮ ಚೌಕ್‌ನಿಂದ ಸಾರ್ವಜನಿಕ ಗಣೇಶ ವಿಸರ್ಜನೆ ಮೆರವಣಿಗೆಯ ವೈಭವ ಶುರುವಾಗಲಿದೆ.

ಅಂದು ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಕಲಾವಿದರು ನಗರದಲ್ಲಿ ಜಾನಪದ ಕಲೆಯ ಹೊಳೆಯನ್ನೇ ಹರಿಸಲಿದ್ದಾರೆ. ಗಣೇಶ ವಿಸರ್ಜನೆ ಮೆರವಣಿಗೆಯು ಮರುದಿನ ಬೆಳಿಗ್ಗೆಯವರೆಗೂ ನಡೆ ಯುವ ನಿರೀಕ್ಷೆ ಇದೆ. ಗಣೇಶ ವಿಸರ್ಜ ನೆಯ ವೈಭವದ ಮೆರವಣಿಗೆಯು ‘ನಿರ್ವಿಘ್ನ’ವಾಗಿ ನೆರವೇರಲಿ ಎಂಬುದೇ ಎಲ್ಲರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT