ಹುಬ್ಬಳ್ಳಿ: ಗದಗ- ಹಾವೇರಿ ನಡುವಿನ ರೈಲು ಮಾರ್ಗ ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ ಐದು ಯೋಜನೆಗಳಿಗೆ ಶೀಘ್ರದಲ್ಲೇ ಚಾಲನೆ ನೀಡುವುದಾಗಿ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಹುಬ್ಬಳ್ಳಿ ನವೀಕೃತ ರೈಲು ನಿಲ್ದಾಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಗಲಕೋಟೆ-ಕುಡಚಿ, ರಾಯದುರ್ಗ-ತುಮಕೂರು, ದಾವಣಗೆರೆ-ತುಮಕೂರು ನೇರ ಮಾರ್ಗ, ತುಮಕೂರು-ವೈಟ್ಫೀಲ್ಡ್ ಉದ್ದೇಶಿತ ನೂತನ ಮಾರ್ಗಗಳಾಗಿವೆ. ಗದಗ-ಹಾವೇರಿ ನಡುವೆ ನೇರ ಸಂಪರ್ಕದಿಂದ ಈ ಭಾಗದ ಜನರ ಬಹುದಿನದ ಕನಸು ನನಸಾಗಲಿದೆ ಎಂದರು.
`ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣವನ್ನು ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಾನು ಸಚಿವನಾದ ಮೇಲೆ ಮೂರನೇ ಬಾರಿ ಸಮೀಕ್ಷೆ ಮಾಡಿಸಿದ್ದೇನೆ. ಕೇಂದ್ರ ಪರಿಸರ ಸಚಿವೆ ಅಂಬಿಕಾ ಸೋನಿ ಅವರೊಂದಿಗೆ ಚರ್ಚಿಸಿ, ಯೋಜನೆ ಜಾರಿಗೆ ಇರುವ ಅಡಚಣೆಗಳನ್ನು ನಿವಾರಿಸುವುತ್ತೇನೆ~ ಎಂದು ಹೇಳಿದರು.
ಹುಬ್ಬಳ್ಳಿಯಿಂದ ಹೊರಡುವ ರೈಲೊಂದಕ್ಕೆ ಸಿದ್ಧಾರೂಢ ಶ್ರೀಗಳ ಹೆಸರು ಇಡಲು ಇಲಾಖೆ ಮುಂದೆ ಪ್ರಸ್ತಾವ ಇದ್ದು, ಶೀಘ್ರದಲ್ಲೇ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು. ನೂತನ ರೈಲು ನಿಲ್ದಾಣದ ಎದುರು ಟ್ಯಾಕ್ಸಿ ಚಾಲಕರಿಗೆ ಅವಕಾಶ ಮಾಡಿಕೊಡಲಾಗುವುದು ಎಂದ ಅವರು ತಿಳಿಸಿದರು.
ಉತ್ತಮ ಸಾಧನೆಗಾಗಿ ನೈರುತ್ಯ ರೈಲ್ವೆ ವಲಯಕ್ಕೆ ಒಂದು ಲಕ್ಷ ರೂಪಾಯಿ ಹಾಗೂ ವಿಭಾಗೀಯ ಕಚೇರಿಗೆ ಎರಡು ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದರು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.