ಮೈಸೂರು: ಮೈಸೂರು- ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆಯ ಪಕ್ಕದ ಜಮೀನಿನಲ್ಲಿ ಶನಿವಾರ ಮೊಸಳೆ ಕಾಣಿಸಿಕೊಂಡಿತು. ಇದರಿಂದಾಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬೆಳಿಗ್ಗೆ 6.30ರ ಸುಮಾರಿಗೆ ಮೊಸಳೆ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಜಮೀನಿನ ಮಾಲೀಕರು ಹಾಗೂ ಸಾರ್ವಜನಿಕರು ತಕ್ಷಣವೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನು ಹಿಡಿದು ಕೆರೆಗೆ ಬಿಡುವಲ್ಲಿ ಯಶಸ್ವಿಯಾದರು.
ಈ ಹಿಂದೆ ದಳವಾಯಿ ಕೆರೆಗೆ ಕೆಲವು ಮೊಸಳೆ ಮರಿಗಳನ್ನು ಬಿಡಲಾಗಿತ್ತು. ಆ ಮರಿಗಳು ದೊಡ್ಡದಾಗಿ ಬೆಳೆದಿದ್ದು, ಕೆರೆಯ ಅಕ್ಕಪಕ್ಕದ ಜಮೀನುಗಳಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿವೆ. ಅರಣ್ಯ ಇಲಾಖೆ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಜಮೀನಿನ ಮಾಲೀಕರು ಒತ್ತಾಯಿಸಿದ್ದಾರೆ.
ಮೈಸೂರಿನ ಕುಕ್ಕರಹಳ್ಳಿ ಕೆರೆ, ಮೈಸೂರು-ನಂಜನಗೂಡು ರಸ್ತೆಯ ದೊಡ್ಡ ಮೋರಿಯಲ್ಲೂ ಈ ಹಿಂದೆ ಮೊಸಳೆಗಳು ಕಾಣಿಸಿಕೊಂಡು ಭಯ ಹುಟ್ಟಿಸಿದ್ದವು.