ಜಮಖಂಡಿ: ತಾಲ್ಲೂಕಿನ ಗದ್ಯಾಳ ಗ್ರಾಮದ ದಲಿತರಿಗೆ ಮೂರು ತಿಂಗಳಿನಿಂದ ಹಾಕಿದ್ದ ಬಹಿಷ್ಕಾರವನ್ನು ಜಿಲ್ಲಾಧಿಕಾರಿ ಮನೋಜ್ ಜೈನ್ ಮಧ್ಯಸ್ಥಿಕೆ, ಶಾಸಕ ಸಿದ್ದು ನ್ಯಾಮಗೌಡ ಉಪಸ್ಥಿತಿಯಲ್ಲಿ ಶನಿವಾರ ನಡೆದ ಸಂಧಾನ ಸಭೆಯಲ್ಲಿ ಅಂತ್ಯಗೊಳಿಸಲಾಯಿತು.
ಜಿಲ್ಲಾಡಳಿತ ವಿಧಿಸಿದ್ದ ಕೆಲವು ಷರತ್ತುಗಳನ್ನು ಒಪ್ಪಿಕೊಂಡ ದಲಿತ ಹಾಗೂ ಸವರ್ಣೀಯರ ಮುಖಂಡರು, ಪರಸ್ಪರ ಕೈಕುಲುಕಿದ ಬಳಿಕ ದೇವಸ್ಥಾನವೊಂದಕ್ಕೆ ಒಟ್ಟಿಗೆ ತೆರಳಿ ತೆಂಗಿನಕಾಯಿ ಒಡೆದರು.
ಇದಕ್ಕೂ ಮೊದಲು ದಲಿತರ ಸಭೆ ನಡೆಸಿ ಅವರ ಅಹವಾಲುಗಳನ್ನು ಆಲಿಸಲಾಯಿತು. ಅವುಗಳನ್ನು ಪರಿಹರಿಸುವ ಭರವಸೆ ನೀಡಲಾಯಿತು. ನಂತರ ನಡೆದ ಸವರ್ಣೀಯರ ಸಭೆಯಲ್ಲಿ ದಲಿತರು ಹೇಳಿಕೊಂಡ ಸಮಸ್ಯೆಗಳನ್ನು ತಿಳಿಸಿ, ಬಹಿಷ್ಕಾರ ಹಿಂತೆಗೆತಕ್ಕೆ ಸಂಧಾನ ನಡೆಸಲಾಯಿತು.