ಸಕಲೇಶಪುರ: ಪಟ್ಟಣದಲ್ಲಿ ಶುಕ್ರವಾರ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ 35ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ `ಕಾಫಿ ಕೃಷಿ ಮೇಳ~ದಲ್ಲಿ 50ಕ್ಕೂ ಹೆಚ್ಚು ಕಂಪೆನಿಗಳು, ಯಂತ್ರೋಪಕರಣ, ಗೊಬ್ಬರ ಪ್ರದರ್ಶನ ಹಾಗೂ ಮಾರಾಟ ನಡೆಸಿದವು.
ಕಾಫಿ ಮಂಡಳಿ ಅಧ್ಯಕ್ಷ ಜಾವಿದ್ ಅಖ್ತರ್ ಹಾಗೂ ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎನ್. ಕೆ. ಪ್ರದೀಪ್ ಮೇಳ ಉದ್ಘಾಟಿಸಿದರು. ಸಂಸದ ಎಚ್.ವಿಶ್ವನಾಥ್, ಶಾಸಕ ಎಚ್.ಕೆ.ಕುಮಾರಸ್ವಾಮಿ, ಮಾಜಿ ಶಾಸಕರಾದ ಬಿ.ಬಿ.ಶಿವಪ್ಪ, ಎಚ್.ಎಂ.ವಿಶ್ವನಾಥ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎನ್.ಬಿ.ಉದಯ್ ಕುಮಾರ್, ಕಾರ್ಯದರ್ಶಿ ವೈ.ಎಸ್.ಗಿರೀಶ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಎಚ್.ಟಿ.ಮೋಹನ್ಕುಮಾರ್ ಪಾಲ್ಗೊಂಡಿದ್ದರು.
ಮೇಳದಲ್ಲಿ ಕಾಫಿ ತೋಟ ಅಗೆತ ಮಾಡಲು ಮಿನಿ ಟಿಲ್ಲರ್, ಉಳುಮೆಗೆ ಮಿನಿ ಟ್ರ್ಯಾಕ್ಟರ್, ಮೆಣಸಿನ ಬಳ್ಳಿ ಹಾಗೂ ಕಾಫಿ ಗಿಡಗಳಿಗೆ ಸ್ಪ್ರೇ ಮಾಡುವ ವಿವಿಧ ಯಂತ್ರೋಪಕರಣ, ಬಳ್ಳಿಯಿಂದ ಕಾಳು ಮೆಣಸು ಬಿಡಿಸುವ ಅಲ್ಯೂಮಿನಿಂ ಏಣಿ, ಇಟಾಲಿಯನ್ ರೈನ್ ಗನ್, ಸೋಲಾರ್ ಬೇಲಿ, ಕಾಫಿ, ಕಾಳುಮೆಣಸು, ಏಲಕ್ಕಿ, ಭತ್ತ, ಶುಂಠಿ ಬೆಳೆಗಳಿಗೆ ಅಗತ್ಯ ಯಂತ್ರೋಪಕಣ ಗಮನ ಸೆಳೆದವು.