ಚಾಮರಾಜನಗರ: ಆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೇಳೈಸಿತ್ತು. ಅದು ಕಿರುಚಿತ್ರಗಳ ಮೂಲಕ ಸಾಕಾರಗೊಂಡಿತ್ತು. ಉತ್ಸಾಹದಿಂದ ಮಕ್ಕಳು ತಯಾರಿಸಿದ ಚಿತ್ರಗಳಲ್ಲಿ ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಹೇಗಿರಬೇಕೆಂಬ ಸಂದೇಶವೂ ಪಡಿಮೂಡಿತು.
ಪ್ರಸಕ್ತ ವರ್ಷವೂ ಒನ್ ಪೀಪಲ್ ಇಂಟರ್ ನ್ಯಾಷನಲ್ ಮಿಡಿಯಾದ ಸಹಯೋಗದಡಿ ನಗರದ ದೀನಬಂಧು ಶಾಲೆಯ ಮಕ್ಕಳು ತಯಾರಿಸಿದ ಕಿರುಚಿತ್ರಗಳು ಗಮನ ಸೆಳೆದವು. ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧ, ಅನಿಷ್ಟ ಬಾಲಕಾರ್ಮಿಕ ಪದ್ಧತಿ, ಅಸ್ಪೃಶ್ಯತೆ, ಪರಿಸರ ಮಾಲಿನ್ಯದ ವಿರುದ್ಧ ಅರಿವು ಮೂಡಿಸುವಂತಹ ಕಿರುಚಿತ್ರ ತಯಾರಿಸಿದ್ದರು. ಈ ಚಿತ್ರಗಳ ಪ್ರದರ್ಶನಕ್ಕಾಗಿ ಹಮ್ಮಿಕೊಂಡಿದ್ದ ಮಾಧ್ಯಮೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು
17 ಮಕ್ಕಳು ಐದು ನಿಮಿಷದ ಅವಧಿಯ ಕಿರುಚಿತ್ರ ತಯಾರಿಸಿದ್ದರು. ಇದಕ್ಕೆ ಅವರದೇ ನಿರ್ದೇಶನ. ಸಂಕಲನದೊಂದಿಗೆ ಸಂಗೀತ ಕೂಡ ನೀಡಿದ್ದರು. ಈ ಚಿತ್ರಗಳೊಂದಿಗೆ ಸ್ವೀಡನ್, ಇಂಗ್ಲೆಂಡ್, ಪಾಂಡಿಚೆರಿ ಶಾಲೆಯ ಮಕ್ಕಳು ತಯಾರಿಸಿದ ಚಿತ್ರಗಳ ಪ್ರದರ್ಶನವೂ ಇತ್ತು. ಕಳೆದ ಬಾರಿಗಿಂತಲೂ ಈ ವರ್ಷ ಪರಿಣಾಮಕಾರಿಯಾದ ಕಿರುಚಿತ್ರ ತಯಾರಿಸಿದ್ದರು. ಹೀಗಾಗಿ, ಸಾಮಾಜಿಕ ಸಂದೇಶ ನೀಡುವಲ್ಲಿ ಮಕ್ಕಳು ಯಶಸ್ವಿಯಾಗಿದ್ದು, ವಿಶೇಷ.