ಬೀದರ್: ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಅಂಗವಾಗಿ ನಗರದ ಬಿವಿಬಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಧ್ವನಿ ಬೆಳಕು ಕಾರ್ಯಕ್ರಮ ಜಿಲ್ಲೆಯ ಜನತೆಗೆ ವಿಜಯನಗರದ ಗತ ವೈಭವವನ್ನು ಕಣ್ಮುಂದೆ ತರುವಲ್ಲಿ ಯಶಸ್ವಿಯಾಯಿತು. ಎರಡು ದಿನಗಳ ಈ ಅಪರೂಪದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ಶನಿವಾರ ಚಾಲನೆ ನೀಡಿದರು.
ಬಿ.ವಿ.ಬಿ. ಕಾಲೇಜಿನ ಮೈದಾನದಲ್ಲಿ ಹಾಕಲಾಗಿದ್ದ ವಿಶಾಲವಾದ ಸೆಟ್ ಹಂಪಿಯ ಬೀದಿಗಳಲ್ಲಿ ಸಂಚರಿಸಿದ ಅನುಭವವನ್ನು ನೋಡುಗರಲ್ಲಿ ಉಂಟು ಮಾಡಿತು. ಹಂಪಿಯ ಸ್ಮಾರಕಗಳಾದ ವಿಠಲ ದೇವಸ್ಥಾನ, ಕಲ್ಲಿನ ರಥ, ಲೋಟಸ್ ಮಹಲ್, ಉಗ್ರ ನರಸಿಂಹ, ಸಾಸಿವೆಕಾಳು ಗಣೇಶ, ಹಂಪಿ ಬಜಾರ್, ಆನೆಗಳ ಲಾಯದ ಸೆಟ್ಗಳು ಬೆಳಕಿನ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದವು.
ಚಿತ್ರರಂಗದ ಖ್ಯಾತ ಮುರಳಿ, ಕೆ.ಎಸ್.ರವೀಂದ್ರನಾಥ, ಅನು ಪ್ರಭಾಕರ, ಸುಧಾರಾಣಿ ಮೊದಲಾದವರ ಹಿನ್ನೆಲೆ ಧ್ವನಿಯಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ ಪ್ರಸ್ತುತ ಪಡಿಸಲಾಯಿತು. ವಿಶ್ವ ಪರಂಪರೆ ಕೇಂದ್ರ ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಪರಿಚಯಿಸುವುದು ಮತ್ತು ಶ್ರಿಕೃಷ್ೞದೇವರಾಯನ ಆಳ್ವಿಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜ್ಯದ 20 ಜಿಲ್ಲೆಗಳಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಸಿ.ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.