ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಸೆಳೆದ ಅಂಚೆಚೀಟಿಗಳು...

Last Updated 10 ಜನವರಿ 2014, 5:40 IST
ಅಕ್ಷರ ಗಾತ್ರ

ಮಡಿಕೇರಿ: ಭಾರತೀಯ ಅಂಚೆ ಇಲಾಖೆ 2013ರಲ್ಲಿ ಬಿಡುಗಡೆ ಮಾಡಿರುವ ಅಂಚೆಚೀಟಿ ನೋಡುಗರ ಗಮನ ಸೆಳೆಯಿತು. ಪುಸ್ತಕ ಮಳಿಗೆ ವಿಭಾಗದಲ್ಲಿ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಯಲ್ಲಿ ಭಾರತೀಯ ಅಂಚೆ ಇಲಾಖೆ 201 ಜಿಲ್ಲಾ ಪ್ರಧಾನ ಅಂಚೆ ಕಚೇರಿಯವರು ಏರ್ಪಡಿಸಿರುವ ವಿವಿಧ ಅಂಚೆ ಚೀಟಿಗಳು ಒಂದಕ್ಕೊಂದು ವಿಭಿನ್ನವಾಗಿದ್ದವು.

ಸ್ವಾಮಿ ವಿವೇಕಾನಂದ, ಸಚಿನ್ ತೆಂಡೂಲ್ಕರ್ ಸೇರಿದಂತೆ 36 ವಿಧದ ಭಾರತೀಯ ಯೋಧರ ಚೀಟಿ, ಸಾಯಿಬಾಬಾ,  ಏಕಲವ್ಯ, ಕಾಡಿನ ಹೂಗಳು, ಪ್ರಶಸ್ತಿ ಪಡೆದುಕೊಂಡ ಮಕ್ಕಳ ಚಿತ್ರಗಳು ಕೂಡ ಅಂಚೆ ಚೀಟಿಯಲ್ಲಿ  ಮೂಡಿಬಂದವು. ಇವುಗಳ ಜತೆಗೆ 80ನೇ ಅಖಿಲ ಭಾರತ ಕನ್ನಡ ಸಾಹತ್ಯ ಸಮ್ಮೇಳನದ ಲಾಂಛನವನ್ನು ಮುದ್ರಿಸಿರುವ ಲಕೋಟೆಗಳು ಕೂಡ ಇದ್ದವು. ಅಂಚೆ ಚೀಟಿ ಸಂಗ್ರಹಿಸುವ  ಹವ್ಯಾಸ ಇಟ್ಟುಕೊಂಡಿರುವವರು ಹಾಗೂ ಸಾಹಿತ್ಯಾಸಕ್ತರು ಅಂಚೆ ಚೀಟಿಗಳನ್ನು ಕೊಳ್ಳುತ್ತಿದ್ದುದು ಕಂಡು ಬಂದಿತು.

‘ಸಂಶೋಧನೆ ಪರಿಸರಕ್ಕೆ ಪೂರಕವಾಗಿರಲಿ’
ಕೊಡಗಿನ ಗೌರಮ್ಮ ವೇದಿಕೆ (ಮಡಿಕೇರಿ): ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಸಂಶೋಧನೆಗಳು ಸುತ್ತಮುತ್ತಲಿನ ಪರಿಸರಕ್ಕೆ ಪೂರಕವಾಗಿರಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಬಸವರಾಜು ಕಲ್ಗುಡಿ ಹೇಳಿದರು.

ಸಾಹಿತ್ಯ ಸಮ್ಮೇಳನದ ಸಮನಾಂತರ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಸಂಶೋಧನೆ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ಬೇಕಾಬಿಟ್ಟಿಯಾಗಿ ನಡೆಯುತ್ತಿವೆ. ಇದಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದರ ಬಗ್ಗೆ ಯಾರು ಕೇಳುತ್ತಿಲ್ಲ ಎಂದು ವಿಷಾದಿಸಿದರು.

ಯಾವುದೇ ಸಂಶೋಧನೆ ತಮ್ಮ ಪರಿಸರಕ್ಕೆ ಪೂರಕವಾದ ಬಹುರೂಪಿ ಮಾದರಿಯಲ್ಲಿರಬೇಕು. ಪರಿಸರಕ್ಕೆ
ಏನು ಬೇಕಾಗಿದೆ ಎಂಬುದನ್ನು ಚಿಂತಿಸಿ ಸಂಶೋಧನೆ ನಡೆಸುವ ಅಗತ್ಯವಿದೆ. ವಿಶ್ವವಿದ್ಯಾನಿಲಯಗಳು ಅರೆಪಟ್ಟಣ, ಅರೆಹಳ್ಳಿಗಳಲ್ಲಿರುವ ಪರಿಸರವನ್ನು ತಮ್ಮ ಜ್ಞಾನವಲಯಕ್ಕೆ ತರುವುದು ಹೇಗೆ ಎಂಬುದನ್ನು ಚಿಂತಿಸಬೇಕಾಗಿದೆ. ಕೃಷಿ ಮಾದರಿ ಜ್ಞಾನವನ್ನು ಮುಖ್ಯ ಅಧ್ಯಯನ ವಲಯಕ್ಕೆ ತರುವ ಬಗ್ಗೆ ವಿಶ್ವವಿದ್ಯಾನಿಲಯಗಳು ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ಜಾನಪದ ತಜ್ಞ ಪ್ರೊ. ಕಾಳೇಗೌಡ ನಾಗಾವಾರ ಜಾನಪದ ಅಧ್ಯಯನ ಎಂಬ ವಿಷಯದ ಬಗ್ಗೆ ಮಾತನಾಡಿ ಸಾಂಸ್ಕೃತಿಕ ಹೊಸ ಸಂಶೋಧನೆ ಸಂದರ್ಭದಲ್ಲಿ ಹೊಸ ಹೊಸ ಅಧ್ಯಯನಗಳು ನಡೆಯಬೇಕಾಗಿದೆ. ವೈವಿಧ್ಯಮಯವಾದ ಚಾರಿತ್ರಿಕ ಪ್ರದೇಶಗಳಲ್ಲಿ ಹಲಬಗೆಯ ಜನವರ್ಗ ಜಾತಿ, ಸಂಸ್ಕೃತಿ ಕಲೆಗಳಿವೆ. ಆಯಾ ಪರಿಸರದ ಪ್ರದೇಶಕ್ಕೆ ಅನುಗುಣವಾಗಿ ಇರುವ ಎಲ್ಲಾ ಬಗೆಯ ಸಂಸ್ಕೃತಿ ಪದ್ಧತಿ ಪರಂಪರೆಗಳ ಅಧ್ಯಯನದ ಅಗತ್ಯವಿದೆ ಎಂದರು.

ಆಕರ ಸಂಶೋಧನೆ ಎಂಬ ವಿಷಯದ ಬಗ್ಗೆ ಮಾತನಾಡಿದ ಡಾ. ಎಂ.ಜೆ. ನಾಗರಾಜ್ ಸಂಶೋಧನೆಗಳು ಜನತೆಗೆ ಸಂವಹನ ಆದಾಗ ಮಾತ್ರ ಅದು ಸಾರ್ಥಕವಾಗುತ್ತದೆ. ನಾವು ನೋಡಿದುದನ್ನು ಇತರರಿಗೆ ಎಷ್ಟರಮಟ್ಟಿಗೆ ಸ್ಫೂರ್ತಿದಾಯಕವಾಗಿ ಹೇಳುತ್ತಿದ್ದೇವೆ ಎಂಬುದರ ಮೇಲೆ ನಮ್ಮ ಕೆಲಸದ ಮೌಲ್ಯ ಅಡಗಿರುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT