ತುಮಕೂರು: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಾತ್ಮಗಾಂಧಿ ವೇಷ ಧರಿಸಿದವರನ್ನು ನೋಡಿ ಅಚ್ಚರಿ ಪಡುತ್ತೇವೆ.
ಆದರೆ ಮಂಗಳವಾರ ನಗರದ ಬಸ್ ನಿಲ್ದಾಣದ ಹಲವೆಡೆ ಮಕ್ಕಳಿಂದ ದೂರವಾಗಿ ಬದುಕು ದೂಡುವುದಕ್ಕಾಗಿ ಗಾಂಧಿ ವೇಷದಲ್ಲಿ ಕಾಣಿಸಿಕೊಂಡವರು ಚಿಂತಾಮಣಿ ಸಮೀಪದ ನಾಯಿನಹಳ್ಳಿಯ 79ರ ವೃದ್ಧ ಸಿದ್ದಪ್ಪ.
ತಮ್ಮ ನೆಚ್ಚಿನ ಗಾಂಧಿ ವೇಷದಲ್ಲಿ ಗಮನಸೆಳೆಯುತ್ತಾ, ಭಾರತ್ ಮಾತಾಕೀ ಜೈ, ಇನ್ಕ್ವಿಲಾಬ್ ಜಿಂದಾಬಾದ್, ಜೈ ಭಾರತ್ ಘೋಷಣೆ ಕೂಗುತ್ತಾ ಮುಂದೆ ಸಾಗುತ್ತಿದ್ದ ಸಿದ್ದಪ್ಪ ಗಾಂಧಿಯಂತೆ ಕಂಡರು, ಅಂದಿನ ಗಾಂಧಿಯಾಗಿರಲಿಲ್ಲ. ಆಧುನಿಕ ಕಾಲದಲ್ಲಿ ಮಕ್ಕಳಿಂದಲೇ ಬೀದಿಗೆ ತಳ್ಳಿಸಿಕೊಂಡು ಬದುಕಿನ ಆಶ್ರಯಕ್ಕಾಗಿ ಹೋರಾಡುತಿರುವ ಗಾಂಧಿಯಾಗಿ ಕಾಣಿಸಿಕೊಂಡರು.
ಹೆತ್ತ ಮಕ್ಕಳು ಜೀವಂತವಾಗಿದ್ದರೂ ಸಾಕುವ ಸ್ಥಿತಿಯಲ್ಲಿ ಇಲ್ಲ. ಸಿದ್ದಪ್ಪ ಮನೆಯಲ್ಲಿದ್ದಂತಹ ಸಂದರ್ಭ ಸ್ವತಃ ಮಕ್ಕಳೇ ಕುಡಿದ ಅಮಲಿನಲ್ಲಿ ತಳಿಸಿರುವ ಘಟನೆಗಳನ್ನು ಜನತೆ ಮುಂದೆ ಹೇಳಿಕೊಂಡು ಭಾವುಕರಾದರು. ಬುದುಕಿಗಾಗಿ ವೇಷ ಧರಿಸಬೇಕಾಗಿ ಬಂತು ಎಂದು ನೋವಿನಿಂದ ಹೇಳಿಕೊಳ್ಳುತ್ತಿದ್ದರು. ನಗರಕ್ಕೆ ಬಂದು ಮೂರು ದಿನವಾಯಿತು. ಅಲ್ಲಲ್ಲಿ ರಾತ್ರಿ- ಹಗಲು ದೂಡುತ್ತಿದ್ದೇನೆ ಎಂದರು.
ತಮ್ಮ ಸ್ವಗ್ರಾಮದಿಂದ ತುಮಕೂರಿಗೆ ಬಂದು ಪ್ರಮುಖ ರಸ್ತೆಗಳಲ್ಲಿ ಗಾಂಧಿ ವೇಷದಲ್ಲಿ ಸಾಗುತ್ತಿದದ್ದನ್ನು ಜನ ಸಾಮಾನ್ಯರು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಸಿದ್ದಪ್ಪ ತಾ ಸಾಗುವ ಪ್ರತಿ ಅಂಗಡಿ ಮುಂದೆ ನಿಂತರೆ ಮಾಲೀಕರು ತಮ್ಮ ಕೈಲಾದ ಹಣ ನೀಡುತ್ತಿದ್ದರು.