ಭದ್ರಾವತಿ: ಬಡವರ ಮನೆಯ ಹೆಣ್ಣು ಮಕ್ಕಳಿಗೆ ಎಲ್ಲಾ ಸೌಕರ್ಯ ಸಿಗುವುದು ಕನಸಿನ ಮಾತು. ಆದರೆ, ಇದಕ್ಕೆ ಅಪವಾದದ ರೀತಿಯಲ್ಲಿ ಗರ್ಭಿಣಿಯರ ಮೊಗದಲ್ಲಿ ಉಲ್ಲಾಸದ ನಗು ಮಿಂಚಿತು.
ಹೌದು! -ಇದು ಆಶ್ಚರ್ಯವಾದರೂ ಸತ್ಯ. ಬುಧವಾರ ಬಿಆರ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಸೀಮಂತ ಕಾಯಕ್ರಮ ಗರ್ಭಿಣಿಯರ ಮೊಗದಲ್ಲಿ ಉಲ್ಲಾಸದ ನಗು ಮಿಂಚಿಸಿತು.
ಬಿಪಿಎಲ್ ಪಡಿತರ ಚೀಟಿಗಿಂತ ಕೆಳಗಿನ ಬಡ ಕುಟುಂಬದ ಗರ್ಭಿಣಿಯರ ಬದುಕಿಗೆ ಒಂದಿಷ್ಟು ಆತ್ಮವಿಶ್ವಾಸ, ಎಲ್ಲಾ ಮಹಿಳೆಯರ ರೀತಿಯಲ್ಲಿ ತಮಗೂ ಗಂಡ, ತವರು ಮನೆಯಲ್ಲಿ ಸಿಗುವ ಸೀಮಂತದ ಭಾಗ್ಯ ಸಾರ್ವಜನಿಕವಾಗಿ ದೊರೆಯುತ್ತಿದೆ ಎಂಬ ಉತ್ತೇಜನಕಾರಿ ಅಂಶ 15 ಮಂದಿ ಮಹಿಳೆಯರಲ್ಲಿ ಕಂಡುಬಂತು.
ಸೀಮಂತ ಭಾಗ್ಯ ಪಡೆದ ಮಂದಿಗೆ ಅರಿಷಿಣ, ಕುಂಕುಮ, ಹೂವು, ಹಣ್ಣು... ಸೇರಿದಂತೆ ಇನ್ನಿತರ ವಸ್ತುವನ್ನು ನೀಡಿದ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಆರೋಗ್ಯಯುತ ಮಗುವಿನ ಜನನದೊಂದಿಗೆ, ಉತ್ತಮ ಬದುಕು ನಡೆಸಿ ಎಂದು ಹಾರೈಸಿದರು.
ವೈದ್ಯ ಡಾ.ಪ್ರದೀಪ್ಕುಮಾರ್ ಮಾತನಾಡಿ, ಗರ್ಭಿಣಿ ತನ್ನ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಉತ್ತಮ ಮಗುವಿನ ಜನನಕ್ಕೆ ಕಾರಣಳಾಗಬೇಕು. ಇದಕ್ಕಾಗಿ ಸರ್ಕಾರಿ ಆಸ್ಪತ್ತೆಯಲ್ಲಿ ದೊರೆಯುವ ಸೌಲಭ್ಯ, ಆರೈಕೆ ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಸತೀಶ್ಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಮಹಮದ್ ಗೌಸ್, ಸದಸ್ಯರಾದ ಸುಶೀಲಮ್ಮ, ಜಯಲಕ್ಷ್ಮೀ, ಸಾವಿತ್ರಮ್ಮ, ತಾಲ್ಲೂಕು ಪಂಚಾಯ್ತಿ ಸದಸ್ಯ ಗಿರೀಶ್, ಸಿಸ್ಟರ್ ಯಶೋದಾ ಹಾಗೂ ಆಶಾ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.
ಮಂಜುಳಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಸ್ವಾಗತಿಸಿದರು. ಜ್ಯೋತಿ ವಂದಿಸಿದರು. ಈ ವಿಶೇಷ ಕಾರ್ಯಕ್ರಮ ವೀಕ್ಷಿಸಲು ನಾಗರಿಕರು, ಫಲಾನುಭವಿ ಕುಟುಂಬದ ಬಂಧುಗಳು ಹಾಜರಿದ್ದರು.