ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಜಯಂತಿಗೆ ಕೆರೆ ಸ್ವಚ್ಛತೆ, ಶ್ರಮದಾನ

Last Updated 3 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ತಿಪಟೂರು: ನಗರದ ಕೆರೆಗೆ ನೀರು ಬಂದ ಮೇಲೆ ವ್ಯಾಪಕವಾಗಿ ಬೆಳೆಯುತ್ತಿದ್ದ ಕಳೆ ಸಸ್ಯ ತೆಗೆಯುವ ಸಮುದಾಯ ಶ್ರಮದಾನದ ಮೂಲಕ ಗಾಂಧಿ ಜಯಂತಿಯ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.

ಮಂಗಳವಾರ ಬೆಳಗ್ಗೆ 9.30ರಲ್ಲಿ ಕೆರೆ ಬಳಿ ಸೇರಿದ ನಾಗರಿಕರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಇಲಾಖೆಗಳ ಸಿಬ್ಬಂದಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಪರಿಸರಾಸಕ್ತರು ಕೆರೆಯಲ್ಲಿ ಬೆಳೆದ ಕಳೆ ತೆಗೆಯಲು ಕೈ ಹಾಕಿದರು. ಅಲ್ಲಲ್ಲಿ ಗುಡ್ಡೆಯಂತೆ ಬೆಳೆದಿದ್ದ ಅಂತರಗಂಗೆ, ಜಂಡು ಮತ್ತಿತರ ಜಲಕಳೆ ಎಳೆಯಲು ವಿವಿಧ ಪರಿಕರ ಬಳಸಿದರು.

ಅಗ್ನಿಶಾಮಕ ದಳದವರು ತಂದಿದ್ದ ತೇಲು ಜಾಕೆಟ್, ಪಾಲಾಳಗರಡಿ, ಹಗ್ಗ, ನಗರಸಭೆಯ ಸ್ವಚ್ಛತೆ ಸಾಮಗ್ರಿಗಳು ಉಪಯೋಗಕ್ಕೆ ಬಂದವು. ಕಳೆಗೆ ಹಗ್ಗ ಕಟ್ಟಲು ದೋಣಿ ಬಳಸಲಾಯಿತು. ಕೆಲ ಯುವಕರು ಈಜಿ, ಟ್ಯೂಬ್ ಹಾಕಿಕೊಂಡು ನೀರಿನ ಮಧ್ಯದ ಕಳೆ ಎಳೆದು ತಂದರು. ಐದಾರು ಅಂಗವಿಕಲರೂ ಈ ಕಾರ್ಯದಲ್ಲಿ ಕೈಜೋಡಿದ್ದು ವಿಶೇಷ. ನಗರಸಭೆ ಸೇರಿದಂತೆ ಕೆಲ ಇಲಾಖೆ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಶಾಸಕ ಬಿ.ಸಿ.ನಾಗೇಶ್ ಸ್ವತಃ ತೊಡಗಿಕೊಳ್ಳುವ ಮೂಲಕ ಪ್ರೇರಣೆ ನೀಡಿದರು. ಸರ್ಕಾರಿ ಪದವಿ ಕಾಲೇಜು ಎನ್‌ಎಸ್‌ಎಸ್ ತಂಡ ಕೆರೆ ಸುತ್ತಲಿನ ಗಿಡಗಂಟೆ ತೆಗೆಯಲು ಶ್ರಮಿಸಿದರು. ಶ್ರಮದಾನದಲ್ಲಿ ಪಾಲ್ಗೊಂಡಿದ್ದ ಜನರಿಗೆಲ್ಲ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿಯರ ತಂಡ ರುಚಿಯಾದ ರಾಗಿ ರೊಟ್ಟಿ, ಚಟ್ನಿ ಒದಗಿಸಿ ತಮ್ಮ ಪಾತ್ರ ನಿರ್ವಹಿಸಿದರು.

ನಗರಸಭೆ ಅಧ್ಯಕ್ಷೆ ಸರಸ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಗೇಪಲ್ಲಿ ನಟರಾಜು, ಸದಸ್ಯ ಸಿಂಗ್ರಿದತ್ತ ಪ್ರಸಾದ್, ಮಂಜುನಾಥ್, ರಾಮಮೋಹನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಶಿವಗಂಗಮ್ಮ, ಎಪಿಎಂಸಿ ಅಧ್ಯಕ್ಷ ದಿವಾಕರ್, ಉಪ ವಿಭಾಗಾಧಿಕಾರಿ ಎಂ.ಶಿಲ್ಪಾ, ತಹಶೀಲ್ದಾರ್ ವಿಜಯಕುಮಾರ್, ಪೌರಾಯುಕ್ತ ಡಾ.ವೆಂಕಟೇಶಯ್ಯ, ಸಿಪಿಐ ನಾಗರಾಜು, ರಾಮಕೃಷ್ಣ, ಬಿಇಒ ಮನಮೋಹನ್, ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ ಮತ್ತಿತರರು ಇದ್ದರು.

ಬಾಲವನಕ್ಕೆ ಕಾಯಕಲ್ಪ
ಹುಳಿಯಾರು: ಕೆಲ ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಪಟ್ಟಣದ ಬಾಲವನವನ್ನು ಸ್ಥಳೀಯ ಕರವೇ ಕಾರ್ಯಕರ್ತರು ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿ ಆಚರಿಸಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಬಾಲವನ ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೊಳಗಾಗಿ ಗಿಡಗಂಟೆ ಬೆಳೆದಿತ್ತು. ಸ್ಥಳೀಯ ಕರವೇ ಕಾರ್ಯಕರ್ತರು ತಾವೇ ಶ್ರಮದಾನ ಮಾಡುವ ಮೂಲಕ ಬಾಲವನ ಸ್ವಚ್ಛಗೊಳಿಸಿದರು. ಜೆಸಿಬಿ ಸಹಾಯದಿಂದ ಹುಲುಸಾಗಿ ಬೆಳೆದಿದ್ದ ಗಿಡಗಂಟೆಗಳನ್ನು ಬೇರು ಸಮೇತ ಕೀಳಿಸಿ ರಾಶಿ ಹಾಕಿದರು.

ಈ ಸಂದರ್ಭ ಕರವೇ ಹೋಬಳಿ ಶಾಖೆಯ ಗೌರವಾಧ್ಯಕ್ಷ ಕ್ಯಾಸೆಟ್ ರಂಗಸ್ವಾಮಿ, ಕರವೇ ಅಧ್ಯಕ್ಷ ಶ್ರೀನಿವಾಸ್ ಪದಾಧಿಕಾರಿಗಳಾದ ಮುರುಳಿ, ಮೆಡಿಕಲ್ ಚನ್ನಬಸವಯ್ಯ, ದಯಾನಂದ್, ಬಸವರಾಜನಾಯ್ಕ, ಕೋರಿಯರ್ ಹರೀಶ್, ನವೀನ್, ಲಕ್ಷ್ಮೀಕಾಂತ್ ಅಂಜನ್‌ಕುಮಾರ್, ಕುಮಾರ್, ಮಹಿಳಾ ಘಟಕದ ಜಯಲಕ್ಷ್ಮಮ್ಮ, ರುಕ್ಸನಾಬೀ, ದೇವಮ್ಮ ಇತರರು ಶ್ರಮದಾನ ಮಾಡಿದರು.

ಜೆಡಿಯು ಪದಾಧಿಕಾರಿಗಳು
ತುಮಕೂರು: ಸಂಯುಕ್ತ ಜನತಾ ದಳ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಕಾರ್ಯಾಧ್ಯಕ್ಷ- ಟಿ.ಎಸ್.ಗಟ್ಟಿ, ಉಪಾಧ್ಯಕ್ಷ- ಬಸವರಾಜು, ಅನಂತರಾಮು, ನಂಜುಂಡಯ್ಯ, ಬಿ.ಎನ್.ಉಮೇಶ್, ಜಯದೇವಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ನಟರಾಜು, ಬಿ.ಟಿ.ಗೋವಿಂದರಾಜು, ಬಿ.ಎಂ.ಲಿಂಗರಾಜು ನೇಮಕಗೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT