ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರದ ಸಿನಿಮಾ ದರಿದ್ರ

ರಂಗಭೂಮಿ ಚಿರಾಯು: ರಂಗಕರ್ಮಿ ಜಿ.ಕೆ. ಗೋವಿಂದ ರಾವ್‌
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳು ದರಿದ್ರ ಸಿನಿಮಾಗಳು. ಇವುಗಳಲ್ಲಿ  ಒಂದೋ ವಿಲನ್‌ ಇರಬೇಕು ಅಥವಾ ಹೆಣ್ಣಿನ ಕಣ್ಣೀರು ಇರಬೇಕು. ಈ ಸಿನಿಮಾಗಳನ್ನು ನೋಡಿಯೇ ಜನರು ಅಳಬೇಕಿದೆ’ ಎಂದು  ಹಿರಿಯ ರಂಗಕರ್ಮಿ ಪ್ರೊ.ಜಿ.ಕೆ.ಗೋವಿಂದ ರಾವ್‌ ಕಿಡಿಕಾರಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.

‘ಈ ಸಿನಿಮಾಗಳನ್ನು ಜನರು ನೋಡುವುದಿಲ್ಲ. ಹೀಗಾಗಿ ಥಿಯೇಟರ್‌ಗಳು ಮುಚ್ಚುತ್ತಿವೆ. ಎರಡು ತಿಂಗಳು ಕಳೆದರೆ ಮನೆಯಲ್ಲೇ ಹೊಸ ಸಿನಿಮಾಗಳನ್ನು ವೀಕ್ಷಿಸಬಹುದು’ ಎಂದರು.

‘ಬಿ.ವಿ.ಕಾರಂತರು ರಂಗಭೂಮಿಯ ಅದ್ಭುತ. ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್‌, ಎಚ್‌.ಎಸ್‌.ಶಿವಪ್ರಕಾಶ್‌ ಅವರು ಹೊಸ ಪ್ರಯೋಗಗಳನ್ನು ಮಾಡಿ ರಂಗಭೂಮಿಯನ್ನು ವಿಸ್ತಾರಗೊಳಿಸಿದರು. ಉತ್ತಮ ನಾಟಕಗಳನ್ನು ಆಡಿಸಿದರೆ ಈಗಲೂ ಕಲಾಕ್ಷೇತ್ರ ಭರ್ತಿಯಾಗುತ್ತದೆ. ರಂಗಭೂಮಿ ಚಿರಾಯು’ ಎಂದು ಅವರು ಪ್ರತಿಪಾದಿಸಿದರು.

‘ಕೈಲಾಸಂ ರಂಗಭೂಮಿಯ ಪಿತಾಮಹ. ಅವರು ಶ್ರೀರಂಗ ಅವರಿಗಿಂತಲೂ ದೊಡ್ಡ ನಾಟಕಕಾರ. 1915–25ರ ಹೊತ್ತಿನಲ್ಲಿ ನಾಟಕ ವೀಕ್ಷಿಸುತ್ತಿದ್ದವರಲ್ಲಿ ಶೇ 90 ಮಂದಿ ಬ್ರಾಹ್ಮಣರು. ಕೈಲಾಸಂ ಅವರು ನಾಟಕಗಳಲ್ಲಿ ಬ್ರಾಹ್ಮಣ ಸಮಾಜವನ್ನು ಚೆನ್ನಾಗಿ ಟೀಕಿಸಿದರು. ಅದನ್ನು ವೀಕ್ಷಿಸಿ ಪ್ರೇಕ್ಷಕರು ನಕ್ಕು ಬಿಟ್ಟರು. ಈಗ ಒಂದು ಸಮುದಾಯವನ್ನು  ಟೀಕಿಸಿದರೆ ದೊಡ್ಡ ವಿವಾದ ಸೃಷ್ಟಿಯಾಗುವ ಹೀನಾಯ ಸ್ಥಿತಿ ಇದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ನಾನು ಕಲಿಯುವ ಕಾಲದಲ್ಲಿ ಓದು ಎಂದರೆ ಪಠ್ಯ ಆಗಿತ್ತು. ವೈ.ಎನ್‌.ಕೆ. ಅವರು ನನಗೆ ಪಠ್ಯೇತರ ಓದಿನ ಹುಚ್ಚು ಹತ್ತಿಸಿದರು. ಓದಿನ ನಾನಾ ಮಗ್ಗುಲುಗಳನ್ನು ಯು.ಆರ್‌.ಅನಂತಮೂರ್ತಿ ಪರಿಚಯಿಸಿದರು’ ಎಂದು ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT