ಮಳವಳ್ಳಿ: ಸತ್ಯ, ಅಹಿಂಸಾ ತತ್ವದಿಂದ ಗುಲಾಮಗಿರಿ ತೊಲಗಿಸಿದ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿ. ಅಂತಹ ವರನ್ನು ವಿದೇಶಗಳಲ್ಲಿ ಇಂದಿಗೂ ಸ್ಮರಿಸುತ್ತಿದ್ದು, ದೇಶದಲ್ಲಿ ಮರೆಯುವ ಸ್ಥಿತಿಗೆ ಹೋಗಿದ್ದೇವೆ ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕನಿಧಿ ಅಧ್ಯಕ್ಷ ಡಾ.ಎಚ್.ಶ್ರೀನಿವಾಸಯ್ಯ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಶಾಂತಿಭವನದಲ್ಲಿ ಶಾಂತಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಯುಜಿಸಿ, ಬೆಂಗಳೂರಿನ ಗಾಂಧಿ ಸ್ಮಾರಕನಿಧಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರ ಅಕಾಡೆಮಿ ಸಹಕಾರದಲ್ಲಿ ಮಂಗಳ ವಾರ ~ಗಾಂಧಿವಾದದ ಪ್ರಸ್ತುತತೆ~ ಎಂಬ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸರಳವಾಗಿ ಬದುಕಲು ಮಾರ್ಗ ದರ್ಶನ ನೀಡಿದ ವ್ಯಕ್ತಿ ಗಾಂಧಿ. ಅಮೇರಿಕಾದ ಅಧ್ಯಕ್ಷ ಒಬಾಮ ಸೇರಿದಂತೆ ಹಲವು ದೇಶದ ಅಧ್ಯಕ್ಷರು ಗಾಂಧಿ ಸ್ಮರಿಸುತ್ತಾರೆ ಎಂದರು.
ಕರ್ನಾಟಕ ಗಾಂಧಿ ಸ್ಮಾರಕನಿಧಿ ಜಂಟಿ ಕಾರ್ಯದರ್ಶಿ ಪ್ರೊ.ಜಿ.ಬಿ.ಶಿವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರು ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಜೀರಿಗೆ ಲೋಕೇಶ್ ಮಾತನಾಡಿದರು.
ಶಾಂತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಚಾರ ಸಂಕಿರಣದ ಸಂಚಾಲಕ ಪ್ರೊ.ನಾಗರಾಜೇಗೌಡ, ಇತರರು ಉಪಸ್ಥಿತರಿದ್ದರು.