ವಾರ್ಧಾ (ಐಎಎನ್ಎಸ್): ಇಲ್ಲಿನ ಸೇವಾಗ್ರಾಮ ಆಶ್ರಮದಲ್ಲಿ ಇಡಲಾಗಿದ್ದ ಮಹಾತ್ಮ ಗಾಂಧೀಜಿ ಅವರ ಕನ್ನಡಕ ನವೆಂಬರ್ನಿಂದ ಕಾಣೆಯಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಕನ್ನಡಕ ಕಾಣೆಯಾಗಿರುವ ಬಗ್ಗೆ ಸಿಬ್ಬಂದಿ ಮೌನವಾಗಿರುವಂತೆ ಸೂಚಿಸಲಾಗಿದೆ ಎಂದು ಆಶ್ರಮದ ಅಧ್ಯಕ್ಷ ಎಂ. ಎಂ. ಗಡ್ಕರಿ ತಿಳಿಸಿದ್ದಾರೆ.
ಗಾಂಧೀಜಿ ಇಲ್ಲಿ ವಾಸಿಸುತ್ತಿದ್ದಾಗ ಬಳಸುತ್ತಿದ್ದ ಎಲ್ಲ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಪಟ್ಟಿಯಲ್ಲಿ ಕನ್ನಡಕವನ್ನು ಸೇರಿಸಿಲ್ಲ. ಗಾಂಧಿ ವಾಸಿಸುತ್ತಿದ್ದ ಗುಡಿಸಲನ್ನು ಕೆಲ ದಿನಗಳ ಹಿಂದೆ ಸ್ವಚ್ಛಗೊಳಿಸುವಾಗ ಕನ್ನಡಕ ಕಾಣೆಯಾಗಿರುವುದು ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಶ್ರಮದ ಅಧಿಕಾರಿಗಳು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಿಸಿಲ್ಲ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲ್ಲವೇಕೆ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಆಶ್ರಮದ ಆಡಳಿತ ಮಂಡಳಿ ಸಭೆ ಸೇರಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
ಮಹಾತ್ಮ ಗಾಂಧೀಜಿ ಅವರು 1936ರಲ್ಲಿ ವಾರ್ಧಾ ಆಶ್ರಮದಲ್ಲಿ ವಾಸಿಸಿದ್ದರು. ಈಗ ಇಲ್ಲಿಗೆ ಪ್ರತಿ ವರ್ಷ 3 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ.