ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಿನ ಮನೆಯಲ್ಲಿ ಕತ್ತಲ ಸಾಮ್ರಾಜ್ಯ

Last Updated 26 ಸೆಪ್ಟೆಂಬರ್ 2011, 5:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂದೂವರೆ ಗಂಟೆಗೂ ಮಿಕ್ಕಿ ಕೈಕೊಟ್ಟ ಕರೆಂಟ್‌ನಿಂದಾಗಿ ಇರುವೆ ಕಚ್ಚಿಸಿಕೊಂಡವರು ಕೆಲವರು. ಕತ್ತಲಲ್ಲಿ ಎಡವಿಬಿದ್ದು ಹಲ್ಲು -ಕೈ ಮುರಿದುಕೊಂಡವರು ಹಲವರು. ಅಧಿಕಾರಿಗಳನ್ನು ಬೈಯುತ್ತ ಕೆಲವರು ಮನೆಗಳತ್ತ ತೆರಳಿದರೆ, ಉಳಿದವರು ಬಾರದ ಕರೆಂಟ್ ಮತ್ತು ಇರದ ಪರ್ಯಾಯ ವ್ಯವಸ್ಥೆಯಿಂದ ರೋಸಿಹೋಗಿ ಪ್ರತಿಭಟನೆ ನಡೆಸಿದರು.

ನಗರದ ಇಂದಿರಾ ಗಾಜಿನ ಮನೆ ಹಾಗೂ ಮಹಾತ್ಮಾ ಗಾಂಧಿ ಸ್ಮಾರಕ ಉದ್ಯಾನದಲ್ಲಿ ಭಾನುವಾರ ರಾತ್ರಿ 7.30ರ ಹೊತ್ತಿಗೆ ಕಂಡ ದೃಶ್ಯ ಇದು.

ಅಲ್ಲಿದ್ದ ಪುಟ್ಟ ರೈಲನ್ನು ಕೆಲ ಹೊತ್ತು ತಡೆದು ಸಂಬಂಧಪಟ್ಟವರು ಸ್ಥಳಕ್ಕೆ ಬರಬೇಕು. ಪ್ರವೇಶ ಶುಲ್ಕವನ್ನು ವಾಪಸು ಕೊಡಬೇಕು. ಇಲ್ಲದಿದ್ದರೆ ಸೋಮವಾರ ದಿನ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದರು. 

ಸಂಜೆ 6.45ರ  ಹೊತ್ತಿಗೆ ಉದ್ಯಾನ ದೊಳಗೆ ಕರೆಂಟ್ ಕೈಕೊಟ್ಟಿತು. ವಾಪಸು ಬಂದಿದ್ದು ರಾತ್ರಿ ಎಂಟು ಗಂಟೆಗೆ. ಈ ಅವಧಿಯಲ್ಲಿ ಮಕ್ಕಳೊಂದಿಗೆ ಒಳಹೋದವರು ಎತ್ತ ಹೋಗಬೇಕು, ಎಲ್ಲಿ ಕೂಡಬೇಕು ಎನ್ನುವ ಅರಿವಿಲ್ಲದೆ ಕತ್ತಲಲ್ಲಿ ತಡಕಾಡಿದರು.

`ಒಂದೂವರೆ ತಾಸಿಗೂ ಮಿಕ್ಕಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಒಳಗೆ ಹೋದರೆ ಕರೆಂಟ್ ಹೋಯಿತು. ಕಾರಂಜಿ ಕುಣಿಯಲಿಲ್ಲ. ಈ ಅವಧಿಯಲ್ಲಿ ಏನು ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು ರಿಯಾಜ್ ಲಕ್ಷೇಶ್ವರ.

`ಉದ್ಯಾನದೊಳಗೆ ಕುಡಿಯಲು ನೀರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿರುವುದಿಲ್ಲ. ಯಾರನ್ನು ಕೇಳಬೇಕು ಎನ್ನುವುದೇ ಸಮಸ್ಯೆ~ ಎಂದು ಪೇಚಾಡಿದರು ಹಳೇಹುಬ್ಬಳ್ಳಿಯ ಗುರುನಾಥನಗರದ ಆರ್.ಎಂ. ಕಾಗದಗಾರ. `ಟಿಕೆಟ್ ಪಡೆಯುವ ಪಾಳಿ ಕೂಡ ಬರೊಬ್ಬರಿ ಇಲ್ಲ. ಜೋರಿದ್ದವರು ಮುಂದೆ ಹೋಗಿ ಟಿಕೆಟ್ ಪಡೆದು ಒಳಗೆ ಹೋಗುತ್ತಾರೆ. ವಯಸ್ಸಾದವರು ಏನು ಮಾಡಬೇಕು? ಎಲ್ಲರೂ ಸರಿಯಾಗಿ ಪಾಳಿಯಲ್ಲಿ ನಿಂತು ಟಿಕೆಟ್ ಪಡೆಯಬೇಕು~ ಎಂದು ಸಲಹೆ ನೀಡಿದರು ರಾಜೇಶ ಲದ್ವಾ.

`ಕಸದ ಡಬ್ಬಿಗಳಿಲ್ಲ. ಕೆಲವರು ತಿಂದಲ್ಲೇ ಕಸವನ್ನು ಬಿಟ್ಟುಹೋಗು ತ್ತಾರೆ. ಕ್ಯಾಂಟೀನಿನಲ್ಲಿ ಸರಿಯಾಗಿ ವಸ್ತುಗಳು ಸಿಗುವುದಿಲ್ಲ~ ಎಂದರು ನಿತಿಕಾ ಲುಡಾಯ.

ಕೊನೆಗೆ ಕರೆಂಟ್ ಬಂದಿದ್ದು ರಾತ್ರಿ ಎಂಟು ಗಂಟೆಗೆ. ಜನರೆಲ್ಲ ಹೋ ಎಂದು ಕೂಗಿ ಸ್ವಾಗತಿಸಿ, ಸಂಗೀತ ಕಾರಂಜಿ ಹತ್ತಿರ ಓಡಿಹೋದರು. `ಉದ್ಯಾನಕ್ಕೆ ಇದುವರೆಗೆ ಜನರೇಟರ್ ವ್ಯವಸ್ಥೆ ಇರಲಿಲ್ಲ. ಶನಿವಾರ ಜನರೇಟರ್ ಬಂದಿದೆ. ಅದು ಸೋಮವಾರದಿಂದ ಕಾರ್ಯ ನಿರ್ವಹಿಲಿಸದೆ~ ಎಂದು ಉದ್ಯಾನ ನಿರ್ವಾಹಕ ಮಹಾಂತೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT