ನವದೆಹಲಿ (ಪಿಟಿಐ): ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಧ್ಯಕ್ಷತೆಯ ರಾಷ್ಟ್ರೀಯ ಸಲಹಾ ಮಂಡಳಿಯಿಂದ(ಎನ್ಎಸಿ) ಪರಿಸರ ತಜ್ಞ ಪ್ರೊ. ಮಾಧವ ಗಾಡ್ಗೀಳ್ ಅವರನ್ನು ಕೈಬಿಟ್ಟಿರುವುದರ ಹಿಂದೆ ಗಣಿಗಾರಿಕೆ ಲಾಬಿಯ ಒತ್ತಡವಿರುವುದಾಗಿ ಮಂಡಳಿಯ ಸದಸ್ಯ ಎನ್.ಸಿ. ಸಕ್ಸೇನಾ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, `ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ಗಾಡ್ಗೀಳ್ ಅವರು ಅತ್ಯಂತ ಕಾಳಜಿಯಿಂದ ವರದಿ ಸಿದ್ಧಪಡಿಸಿದ್ದರು. ಘಟ್ಟ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗೆ ನಿಷೇಧ ಹೇರುವಂತೆ ಶಿಫಾರಸು ಮಾಡಿದ್ದರು. ಇದರಿಂದ ಗಣಿ ಉದ್ಯಮಿಗಳಿಗೆ ಹಿನ್ನಡೆಯಾಗಿತ್ತು. ಗಣಿ ಉದ್ಯಮಿಗಳ ಒತ್ತಡದ ಹಿನ್ನೆಲೆಯಲ್ಲಿ ಕಳೆದ ತಿಂಗಳು ರಾಷ್ಟ್ರೀಯ ಸಲಹಾ ಮಂಡಳಿ ಪುನರ್ ರಚನೆಯ ವೇಳೆ ಅವರನ್ನು ಕೈಬಿಟ್ಟಿರಬಹುದು~ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋನಿಯಾ, `ಎನ್ಎಸಿಗೆ ಹೊಸ ಹೊಸ ಸದಸ್ಯರ ಅಗತ್ಯವಿದೆ~ ಎಂದಿದ್ದಾರೆ.