ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಢ ನಿದ್ದೆಯಲ್ಲಿ ಶಿಕ್ಷಣ ಇಲಾಖೆ!

Last Updated 16 ಜನವರಿ 2012, 10:40 IST
ಅಕ್ಷರ ಗಾತ್ರ

ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆ ಗಾಢ ನಿದ್ದೆಯಲ್ಲಿದೆಯೇ?
ಇಲಾಖೆ ನೀಡಬೇಕಾದ ಮಾಹಿತಿ, ಪ್ರಕಟಣೆಗಳನ್ನು ಶಿಕ್ಷಕರ ಸಂಘಗಳ ಪ್ರತಿನಿಧಿಗಳು, ಕೆಲವೊಮ್ಮೆ ಶಿಕ್ಷಕರೇ ನೀಡುತ್ತಿರುವುದನ್ನು ಗಮನಿಸಿದರೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಗಾಢ ನಿದ್ದೆಯಲ್ಲಿರಬೇಕು ಎಂಬ ಅನುಮಾನ ಕಾಡದೇ ಇರದು. ಇಲ್ಲವೇ, ಇಲಾಖೆಯ ಪರವಾಗಿ ಪ್ರಕಟಣೆ ನೀಡುವಂತೆ ಶಿಕ್ಷಕರ ಸಂಘಟನೆಗಳಿಗೆ ಹಾಗೂ ಕೆಲವೊಂದು ಶಿಕ್ಷಕರಿಗೆ ಅನುಮತಿ ನೀಡಿರಬಹುದೇ?

ಪ್ರೌಢಶಾಲೆಗಳ ಶಿಕ್ಷಕರ ಸೇವಾ ಪುಸ್ತಕದಲ್ಲಿನ ವಿವರಗಳನ್ನು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಡಿ (ಎಚ್‌ಆರ್‌ಎಂಎಸ್) ಆನ್‌ಲೈನ್ ಮೂಲಕ ಅಳವಡಿಸುವಂತೆ ಇಲಾಖೆಯ ಗುಲ್ಬರ್ಗ ಆಯುಕ್ತಾಲಯ ಆದೇಶಿಸಿದೆಯಂತೆ. ಈ ಕಾರ್ಯವನ್ನು ಜ. 25ರ ಒಳಗಾಗಿ ಪೂರ್ಣಗೊಳಿಸುವಂತೆಯೂ ಆದೇಶಿಸಲಾಗಿದೆಯಂತೆ.
ಶಿಕ್ಷಕ ಸಮುದಾಯಕ್ಕೆ ಈ ಮಾಹಿತಿಯನ್ನು ಹಾಗೂ ಯಾವ ವೆಬ್‌ಸೈಟ್‌ನಲ್ಲಿ ಮಾಹಿತಿ ಅಳವಡಿಸಬೇಕು ಎಂಬ ಸೂಚನೆಯನ್ನು ಇಲಾಖೆಯ ಉಪನಿರ್ದೇಶಕರು ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳು ನೀಡಬೇಕು. ಆದರೆ, ಜಿಲ್ಲೆಯ ಶಿಕ್ಷಕರಿಗೆ ಈ ಸೂಚನೆಯನ್ನು ನೀಡಿರುವುದು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕ!
ಜಿಲ್ಲಾ ಘಟಕದ ಅಧ್ಯಕ್ಷ ಝಾಕೀರ್‌ಹುಸೇನ್ ಕುಕನೂರು, ಪ್ರಧಾನ ಕಾರ್ಯದರ್ಶಿ ರಾಮಣ್ಣ ತಳವಾರ ಹೆಸರಿನ ಲೆಟರ್‌ಪ್ಯಾಡ್‌ನಲ್ಲಿ ಈ ವಿಷಯವನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿದೆ.

ಆದರೆ, ಝಾಕೀರ್ ಹುಸೇನ್‌ಕುಕನೂರು ಅವರು ಕಳೆದ ಹಲವಾರು ತಿಂಗಳಿನಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ!

ಜ. 11ರಂದು ಜರುಗಿದ ರಥೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಅಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30 ಗಂಟೆ ವರೆಗೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ಈ ಸೂಚನೆಯನ್ನು ಮಾಧ್ಯಮಗಳಿಗೆ ನೀಡಿದ್ದು ಇಲಾಖೆಯ ಅಧಿಕಾರಿಗಳಲ್ಲ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ತಾಲ್ಲೂಕಿನ ಶಾಲೆಯೊಂದರ ಶಿಕ್ಷಕ ಪ್ರತ್ಯೇಕವಾಗಿ ಈ ಮಾಹಿತಿ ರವಾನಿಸಿದ್ದರು.

ಅಂದರೆ, ಇಲಾಖೆಯೇ ಅಧಿಕೃತವಾಗಿ ನೀಡಬೇಕಾದ ಮಾಹಿತಿಯನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆಸಕ್ತಿ ಇಲ್ಲವೇ ಅಥವಾ ಒಂದು ಪತ್ರಿಕಾ ಪ್ರಕಟಣೆ ನೀಡಲಾರದಷ್ಟು ಆರ್ಥಿಕ ಸಂಕಷ್ಟ ದಲ್ಲಿ ಇಲಾಖೆ ಇದೆಯೇ?
ಇದಕ್ಕೆ ಡಿಡಿಪಿಐ ಮಂಟೇಲಿಂಗಾಚಾರ್ ಏನನ್ನುತ್ತಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT