ಎಚ್.ಡಿ.ಕೋಟೆ: ತಮ್ಮ ಮಗ ಶಾಲೆಯ ಆವರಣದಲ್ಲಿ ತನ್ನ ಕೈ ಮುರಿದುಕೊಂಡು ಆಸ್ಪತ್ರೆ ಸೇರಿ ಐದು ದಿನವಾಗಿದ್ದರೂ ಶಾಲೆಯ ಪ್ರಾಂಶುಪಾಲರಾಗಲಿ ಶಿಕ್ಷಕರಾಗಲಿ ಅಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸಿಲ್ಲ ಮತ್ತು ಸೌಜನ್ಯಕ್ಕೂ ಭೇಟಿ ನೀಡಿಲ್ಲ ಎಂದು ವಿದ್ಯಾರ್ಥಿ ಮಂಜುನಾಥನ ತಂದೆ ಕೆಂಡಗಣ್ಣಾರಾಧ್ಯ ಶನಿವಾರ ಆರೋಪಿಸಿದ್ದಾರೆ.
ಪಟ್ಟಣದ ಸರ್ಕಾರಿ ಪಧವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಇಬ್ಬರು ವಿದ್ಯಾರ್ಥಿಗಳು ಆಟ ಆಡುತ್ತಿದ್ದ ಸಂದರ್ಭದಲ್ಲಿ ತಮ್ಮ ಮಗ ಮಂಜುನಾಥ್ (!5) ಕೆಳಗೆ ಬಿದ್ದು ಎಡಗೈ ಮೂಳೆ ಮುರಿಯಿತು. ಆದರೆ, ಸರಿಯಾದ ಚಿಕಿತ್ಸೆ ಕೊಡಿಸದೇ ಬೇಜವಾಬ್ದಾರಿಯಿಂದ ವರ್ತಿಸಿ ಒಬ್ಬನನ್ನೇ ಮನೆಗೆ ಹೋಗುವಂತೆ ತಿಳಿಸಿದ್ದಾರೆ.
ಇದರಿಂದ ಭಯಗೊಂಡ ನನ್ನ ಮಗ ತೀವ್ರ ನೋವಿನಿಂದ ಕಂಗಾಲಾಗಿ ಮನೆಗೂ ಬಾರದೆ ಬಸ್ ನಿಲ್ದಾಣದಲ್ಲೇ ಕುಳಿದ್ದ. ಈ ಬಗ್ಗೆ ಯಾರೋ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ಉಪ ಪ್ರಾಚಾರ್ಯರು, ರಾಜು ಮನೆಗೆ ಹೋಗುವಂತೆ ತಿಳಿಸಿದರು ಎಂದಿದ್ದಾನೆ.
ತೀವ್ರ ನೋವಿನಿಂದ ಬಳಲುತ್ತಿದ್ದದರಿಂದ ವೈದ್ಯರನ್ನು ಸಂಪರ್ಕಿಸಿದಾಗ ಈತನ ಕೈ ಮುರಿತವಾಗಿದ್ದು ತಿಳಿಯಿತು ಇದರಿಂದ ತಕ್ಷಣ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದೇನೆ ಎಂದರು.
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಟಿ. ಮಂಜುನಾಥ್, `ವಿದ್ಯಾರ್ಥಿ ಚಿಕಿತ್ಸೆಗೆ ಸರ್ಕಾರದ ವತಿಯಿಂದ ನೆರವು ನೀಡಲಾಗುವುದು. ಉಪ ಪ್ರಾಂಶುಪಾಲರನ್ನು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ತಿಳಿಸಿದ್ದೇನೆ~ ಎಂದು ಪ್ರಜಾವಾಣಿಗೆ ಹೇಳಿದರು.