ನವದಹೆಲಿ (ಪಿಟಿಐ): ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡಿರುವ ಆಟಗಾರರ ವಿವರಗಳನ್ನು ಕಡ್ಡಾಯವಾಗಿ ಬಿಸಿಸಿಐಗೆ ನೀಡಬೇಕು ಎಂದು ಫ್ರಾಂಚೈಸಿಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಖ್ಯಸ್ಥ ರಾಜೀವ್ ರಾಜೀವ್ ಶುಕ್ಲಾ ಸೂಚಿಸಿದ್ದಾರೆ.
`ಬಿಸಿಸಿಐ ಜೊತೆಗಿನ ಬಾಂಧವ್ಯವನ್ನು ಉತ್ತಮವಾದ ರೀತಿಯಲ್ಲಿ ಕಾಪಾಡಿಕೊಂಡು ಹೋಗಬೇಕು ಎನ್ನುವುದು ನಮ್ಮ ಬಯಕೆಯಾಗಿದೆ. ಆದ್ದರಿಂದ ಆಟಗಾರರು ಐಪಿಎಲ್ ಅಥವಾ ಇತರೆ ಯಾವುದೇ ಟೂರ್ನಿಗಳನ್ನು ಆಡುವಾಗ ಗಾಯದ ಸಮಸ್ಯೆ ಎದುರಿಸಿದರೆ ಅದನ್ನು ಬಿಸಿಸಿಐ ತಿಳಿಸಬೇಕು.
ಇದರಿಂದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಉಂಟಾಗುವ ತೊಡಕನ್ನು ನಿವಾರಿಸಬಹುದು~ ಎಂದು ಶುಕ್ಲಾ ಹೇಳಿದ್ದಾರೆ.ಇತ್ತೀಚಿಗೆ ನಡೆದ ಫ್ರಾಂಚೈಸಿಗಳೊಂದಿಗಿನ ಸಭೆಯಲ್ಲಿ ಎಲ್ಲಾ ತಂಡಗಳಲ್ಲಿಯೂ ಕೆಲ ಆಟಗಾರರಿಗೆ ಗಾಯದ ಸಮಸ್ಯೆಯಿದೆ ಎನ್ನುವುದು ಗೊತ್ತಾಗಿದೆ.
ಆದರೆ ಈ ಕುರಿತು ನಿಗಾ ವಹಿಸಲು ತಂಡದ ಆಡಳಿತ ಮಂಡಳಿ ಹಾಗೂ ಫಿಸಿಯೊಗೆ ತಿಳಿಸಲಾಗಿದೆ. ಇದಕ್ಕಾಗಿ ಫಿಸಿಯೊ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.
ಆಟಗಾರರು ಗಾಯಗೊಂಡಿದ್ದಕ್ಕೆ ಕೇವಲ ಐಪಿಎಲ್ ಕ್ರಿಕೆಟ್ ಅನ್ನು ಟೀಕಿಸುವುದು ಸರಿಯಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಹೆಚ್ಚು ಆಟಗಾರರು ಗಾಯಗೊಂಡಿದ್ದಾರೆ. ಆದರೂ ಈ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಿಲ್ಲ. ಆದರೆ ಫ್ರಾಂಚೈಸಿಗಳು ಮಾತ್ರ ಯಾವುದೇ ಕಾರಣಕ್ಕೆ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವಂತಿಲ್ಲ ಎನ್ನುತ್ತಾರೆ ಶುಕ್ಲಾ.