ಬೆಳಗಾವಿ: ಬುಧವಾರ ರಾತ್ರಿ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ಆರು ಜನರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಕೆಎಲ್ಇ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದಾಶಿವನಗರದ ನಿವಾಸಿಗಳಾದ ಸಾಹಿಲ್ ಕಾಜುಕರ್ (16), ಸೋಮೇಶ ಮಡಿವಾಳ (16) ಹಾಗೂ ಸಚಿನ್ ಕುಂಪಿ (18) ಅವರ ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿರುವ ಇವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸವರಾಜ ಕೋಲಕಾರ (33) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದ ಹಿನ್ನೆಲೆಯಲ್ಲಿ ಸಂತೋಷ ಕಾಳೆ (48) ಹಾಗೂ ಅಪ್ಪಾಜಿ ಮಾಳವಾಡಕರ್ (55) ಎಂಬುವವರನ್ನು ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟಿದ್ದ ಗೀತಾ ಗಜಾನನ ಸಪ್ಲೆ (42), ಸುಜಲ್ ಸಪ್ಲೆ (10), ಗಂಗಪ್ಪ ಮುದಲಿ (52) ಹಾಗೂ ಪ್ರಜ್ವಲ್ ಅನಿಲ್ ಮಾಳಿ (16) ಅವರ ಮನೆಗೆ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ, ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಜಿಲ್ಲಾಧಿಕಾರಿ ಎನ್. ಜಯರಾಮ್ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
‘ಹೆಸ್ಕಾಂ’ನಿಂದ ರೂ.1 ಲಕ್ಷ ಪರಿಹಾರ: ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ‘ಹೆಸ್ಕಾಂ’ ವತಿಯಿಂದ ತಲಾ ರೂ.1 ಲಕ್ಷ ಹಾಗೂ ಗಾಯಾಳುಗಳಿಗೆ ಚಿಕಿತ್ಸೆಗಾಗಿ ತಲಾ ರೂ. 40,000 ಪರಿಹಾರ ಘೋಷಿಸಲಾಗಿದೆ.