ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯ್ ಕಾ ಗೀತ್ ಹಿಂದಿ ನೃತ್ಯರೂಪಕ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಈಗಾಗಲೇ ನಾಟಕ, ಯಕ್ಷಗಾನ, ಏಕವ್ಯಕ್ತಿ ಹೀಗೆ ನಾನಾ ರೂಪದಲ್ಲಿ ಪ್ರದರ್ಶನಗೊಂಡಿರುವ ಬಿ.ಎಂ.ಶ್ರೀಯವರ ಸಂಗ್ರಹದ ಕನ್ನಡದ ಪ್ರಸಿದ್ಧ ಜಾನಪದ ಗೀತೆ `ಪುಣ್ಯಕೋಟಿ~ ಗೋವಿನ ಹಾಡು ಇದೀಗ `ಗಾಯ್ ಕಾ ಗೀತ್~ ಹಿಂದಿ ಅವತರಣಿಕೆಯ ನೃತ್ಯ ರೂಪಕವಾಗಿ ಪ್ರಯೋಗಗೊಳ್ಳುತ್ತಿದೆ. 

ಪ್ರದರ್ಶನ ಫೆಬ್ರುವರಿ 23, (ಗುರುವಾರ) ಸಂಜೆ 6-30ಕ್ಕೆ ಹನುಮಂತನಗರದ ರಾಮಾಂಜನೇಯ ಆವರಣದ ಕೆ.ಹೆಚ್. ಕಲಾಸೌಧದಲ್ಲಿ ನಡೆಯಲಿದೆ.

ಭಾರತ ಸರ್ಕಾರದ ಸಂಸ್ಕತಿ ಇಲಾಖೆಯ ಸಹಕಾರದೊಂದಿಗೆ ನಡೆಯಲಿರುವ ಈ ನೃತ್ಯ ರೂಪಕವನ್ನು ಚಿದಾನಂದ ಕುಲಕರ್ಣಿಯವರು ನಿರ್ದೇಶಿಸುತ್ತಿದ್ದು, ಪುಣ್ಯಕೋಟಿಯ ಹಾಡುಗಳನ್ನು ಪ್ರೊ. ಎಸ್. ಕೆ.ಕುಲಕರ್ಣಿಯವರು ಹಿಂದಿಗೆ ರೂಪಾಂತರಿಸಿದ್ದಾರೆ. ಕನ್ನಡದ ಖ್ಯಾತ ಹಿಂದುಸ್ತಾನಿ ಗಾಯಕರಾದ ಪ್ರಸನ್ನ ವೈದ್ಯ ಅವರ ಸಂಗೀತ ನಿರ್ದೇಶನದಲ್ಲಿ ಧ್ವನಿಸುರುಳಿ ಸಿದ್ಧಗೊಂಡಿದೆ.

ಕಥೆಯನ್ನು ಹಿಂದಿ ರೂಪಕವಾಗಿಸುವಲ್ಲಿ ವಿಶೇಷ ಬದಲಾವಣೆ ಮಾಡದಿದ್ದರೂ ಈಗಿರುವ ಪರಿಸ್ಥಿತಿಗೆ ತಕ್ಕಂತೆ, ಹಣ ಸಂಪಾದನೆಯ ಭರದಲ್ಲಿರುವವರಿಗೆ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಲು ಪ್ರೇರೇಪಣೆಯಾಗುವ ಆಶಯದೊಂದಿಗೆ ಕಥೆ ಮೂಡಿ ಬಂದಿದೆ ಎಂದು ಸಹ ನಿರ್ದೇಶಕರಾದ ರಾಧಾಕೃಷ್ಣ ಉರಾಳ ತಿಳಿಸಿದರು.

ರಾಜ್ಯಪ್ರಶಸ್ತಿ ವಿಜೇತ, ನಟ ನಿರ್ದೇಶಕ ಯಶವಂತ್ ಸರ್‌ದೇಶಪಂಡೆ, ಹಿರಿಯ ಸಾಹಿತಿಗಳಾದ ಪ್ರೊ. ಜಿ.ಎಚ್. ಹನ್ನೆರಡು ಮಠ, ಗಂಗೂಬಾಯಿ ಹಾನಗಲ್ ವಿ.ವಿಯ ಸಿಂಡಿಕೇಟ್ ಸದಸ್ಯರೂ ಆಗಿರುವ ಪ್ರಾಧ್ಯಾಪಕಿ ಡಾ. ಬಿ.ಎಂ.ಜಯಶ್ರೀ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಸನ್ನ ವೈದ್ಯ ಹಾಗೂ ಸಮಷ್ಠಿ ತಂಡದ ಸಂಚಾಲಕರಾದ ರವೀಂದ್ರ ಪೂಜಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಮಹಾದೇವ ಸ್ವಾಮಿ ಅವರ ಬೆಳಕು, ವಿಶ್ವನಾಥ ಉರಾಳ ನಿತ್ಯಾನಂದ ಅವರ ಪ್ರಸಾದನ, ಗುರುಪ್ರಸಾದ್, ಮಹೇಶ್ ಎಸ್. ಪಲ್ಲಕ್ಕಿಯವರ ರಂಗಸಜ್ಜಿಕೆಯೊಂದಿಗೆ ಪ್ರದರ್ಶನ ತೆರೆಕಾಣಲಿದೆ. ಪ್ರದರ್ಶನ ಪ್ರವೇಶ ಉಚಿತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT