ಬೆಂಗಳೂರು: ಶಿವ ಕಪೂರ್ ಗುರುವಾರ ಇಲ್ಲಿ ಆರಂಭವಾಗುವ ಹೀರೊ ಇಂಡಿಯನ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
`ಕಳೆದ ಕೆಲ ತಿಂಗಳುಗಳಿಂದ ನಾನು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದೇನೆ. ತವರು ನೆಲದಲ್ಲಿ ನಡೆಯುವ ಪ್ರಮುಖ ಟೂರ್ನಿಯಲ್ಲಿ ಗೆಲುವು ಪಡೆಯಬೇಕೆಂಬ ಕನಸನ್ನು ಎಲ್ಲ ಗಾಲ್ಫ್ ಸ್ಪರ್ಧಿಗಳು ಕಾಣುವರು. ಇಲ್ಲಿ ಚಾಂಪಿಯನ್ ಆಗಲು ತಕ್ಕ ಪ್ರಯತ್ನ ನಡೆಸುವೆನು~ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
`ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ನಲ್ಲಿ ಆಡುವುದು ವಿಶೇಷ ಅನುಭವ ನೀಡಲಿದೆ. ನನ್ನ ಹುಟ್ಟೂರು ದೆಹಲಿಯಲ್ಲಿ ಆಡುವ ಸಂದರ್ಭ ಹೆಚ್ಚಿನ ಒತ್ತಡ ಇರುತ್ತದೆ. ಆದರೆ ಇಲ್ಲಿ ನಿರಾಳವಾಗಿ ಆಡಬಹುದು. ಇಂಡಿಯನ್ ಓಪನ್ ಟೂರ್ನಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ನಡೆಯುತ್ತಿದೆ. ಭಾರತದಲ್ಲಿ ಗಾಲ್ಫ್ ಬೆಳವಣಿಗೆಯ ನಿಟ್ಟಿನಲ್ಲಿ ಇದು ಉತ್ತಮ ಹೆಜ್ಜೆ~ ಎಂದು ನುಡಿದರು.
ಸ್ಥಳೀಯ ಸ್ಪರ್ಧಿಗಳಾದ ಅನಿರ್ಬನ್ ಲಾಹಿರಿ ಮತ್ತು ಸಿ. ಮುನಿಯಪ್ಪ ಅವರೂ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. `ಏಷ್ಯನ್ ಟೂರ್ನ ಟೂರ್ನಿಯೊಂದು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಕೆಜಿಎ ಕೋರ್ಸ್ನಲ್ಲಿ ಹಲವು ವರ್ಷ ಗಳಿಂದ ಆಡುತ್ತಿದ್ದೇನೆ. ಇದು ನೆರವಿಗೆ ಬರಲಿದೆ~ ಎಂದು ಲಾಹಿರಿ ತಿಳಿಸಿದರು.
`ಬೆಂಗಳೂರಿನಲ್ಲಿ ಗಾಲ್ಫ್ ಜನಪ್ರಿಯತೆ ಪಡೆಯುತ್ತಿದೆ. ಈ ಟೂರ್ನಿ ಇಲ್ಲಿನ ಯುವ ಸ್ಪರ್ಧಿಗಳಿಗೆ ಉತ್ತೇಜನ ನೀಡಲಿದೆ ಎಂದರು.