ಬೆಂಗಳೂರು: ಉತ್ತಮ ಆಟದ ಬಲದೊಂದಿಗೆ ಮಿಂಚಿದ ಅದಿತಿ ಅಶೋಕ್ ಅವರು 94ನೇ ಅಖಿಲ ಭಾರತ ಮಹಿಳಾ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಎಂಟರ ಘಟ್ಟಕ್ಕೆ ರಹದಾರಿ ಪಡೆಯುವಲ್ಲಿ ಯಶಸ್ವಿಯಾದರು.
ಕರ್ನಾಟಕ ಗಾಲ್ಫ್ ಸಂಸ್ಥೆಯ ಕೋರ್ಸ್ನಲ್ಲಿ ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಅವರು ಮೆಹರ್ ಅತ್ವಾಲ್ ಅವರನ್ನು ಸೋಲಿಸಿದರು. ಹದಿನಾಲ್ಕು ಹೋಲ್ಗಳ ಪೈಪೋಟಿಯ ಕೊನೆಯಲ್ಲಿ 1ಸ್ಟ್ರೋಕ್ ಅಂತರದಲ್ಲಿ ಅದಿತಿ ಮುನ್ನಡೆ ಸಾಧಿಸಿದರು.
ಅಮನ್ದೀಪ್ ದ್ರಾಲ್, ಗೌರಿ ಮೊಂಗಾ, ತಲ್ವೀನ್ ಬತ್ರಾ, ಗುರ್ಬಾನಿ ಸಿಂಗ್, ಮಿಲಿ ಸರೊಹಾ, ಅಮೃತಾ ಸರ್ನಾ ಹಾಗೂ ಶ್ರೇಯಾ ಘೈ ಅವರೂ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡರು.
ಇದೇ ಕೋರ್ಸ್ನಲ್ಲಿ ನಡೆಯುತ್ತಿ ರುವ 110ನೇ ಅಖಿಲ ಭಾರತ ಅಮೆಚೂರ್ ಚಾಂಪಿಯನ್ ಷಿಪ್ನಲ್ಲಿ ಅಭಿಜಿತ್ ಚಢಾ ಹಾಗೂ ಎಸ್.ಚಿಕ್ಕರಂಗಪ್ಪ ಅವರು ಪ್ರೀ ಕ್ವಾರ್ಟರ್ ಫೈನಲ್ ತಲುಪಿದರು.
ವಿಶ್ವಾಸಪೂರ್ಣ ಆಟವಾಡಿದ ಅಭಿಜಿತ್ ಅವರು ಪ್ರಿನ್ಸ್ ಕಜೊತಿಯಾ ವಿರುದ್ಧ ಗೆದ್ದರು. 19 ವರ್ಷ ವಯಸ್ಸಿನೊಳಗಿನವರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದಿರುವ ಅಭಿಜಿತ್ಗೆ ಪ್ರಿನ್ಸ್ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.
ಸ್ಥಳೀಯ ಆಟಗಾರ ಚಿಕ್ಕರಂಗಪ್ಪ ಅವರೂ ನಿಖರವಾಗಿ ಕ್ಲಬ್ ಬೀಸುವ ಮೂಲಕ ಯಶಸ್ಸು ಪಡೆದು, ಮುಂದಿನ ಹಂತಕ್ಕೆ ಕಾಲಿಟ್ಟರು. 32ರ ಸುತ್ತಿನ ಪೈಪೋಟಿಯಲ್ಲಿ ಅವರು ಪ್ರತಾಪ್ ಅತ್ವಾಲ್ ಅವರನ್ನು ಸೋಲಿಸಿದರು.
ಸಕೀಬ್ ಅಹ್ಮದ್, ರಾಜಾ ಸರ್ದಾರ್, ಆದಿತ್ಯ ಭಂಡಾರ್ಕರ್, ಪ್ರೀತಮ್ ಹರಿದಾಸ್, ಭಾನುಪ್ರತಾಪ್ ಸಿಂಗ್, ಗಗನ್ ವರ್ಮ, ಉದಯ್ ಮಾನೆ, ಸಮರೇಶ್ ಸರ್ದಾರ್, ಸಂಜಯ್ ಲಾಕ್ರಾ, ರಾಹುಲ್ ರವಿ, ರಾಘವ್ ವಾಹಿ, ಮರಿ ಮುತ್ತು, ಮೊಹಮ್ಮದ್ ನಜೀಮ್ ಹಾಗೂ ಎನ್.ತಂಗರಾ ಜನ್ ಅವರೂ ಪ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.