ಹಿರೇಕೆರೂರ: `ಸಮುದಾಯದ ಸಹಭಾಗಿತ್ವ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ಮಾತ್ರವೇ ವನ್ಯ ಸಂಪತ್ತು ಉಳಿಸಿಕೊಳ್ಳಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಗಿಡಮರಗಳನ್ನು ಬೆಳೆಸಲು ಸಮುದಾಯದ ಸಹಕಾರ ಪಡೆದುಕೊಳ್ಳಬೇಕು' ಎಂದು ಮುಖ್ಯ ಶಿಕ್ಷಕ ವೀರೇಶ ಕೊಪ್ಪದ ಹೇಳಿದರು.
ತಾಲ್ಲೂಕಿನ ಚಿನ್ನಮುಳಗುಂದ ಗ್ರಾಮದ ಕೆ.ಬಿ.ಪಾಟೀಲ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಿಡಮರಗಳನ್ನು ಕಡಿಯುವುದರಿಂದ ಪರಿಸರ ನಾಶವಾಗುತ್ತಿದೆ, ಹೀಗಾಗಿ ಹವಾಮಾನದಲ್ಲಿ ವೈಪರಿತ್ಯಗಳು ಉಂಟಾಗಿ ಪರಿಸರ ಮುನಿಸಿಕೊಳ್ಳುತ್ತದೆ. ಇಂತಹ ಅನಾಹುತಗಳನ್ನು ತಡೆದು ಪರಿಸರ ರಕ್ಷಣೆ ಮಾಡಲು ಗಿಡಮರಗಳನ್ನು ಬೆಳೆಸುವುದು ಅತ್ಯವಶ್ಯವಾಗಿದೆ ಎಂದರು.
ವಿದ್ಯಾರ್ಥಿ ಪ್ರತಿನಿಧಿಗಳಾದ ಮಧುಮತಿ ಮುನಿಗೋಳ ಹಾಗೂ ಸುಧಾ ರಾಗೇರ ಚಾಲನೆ ನೀಡಿದರು. ಶಿಕ್ಷಕರಾದ ಎನ್. ಎಂ.ಖಂಡೆಪ್ಪಗೌಡ್ರ, ಆರ್.ಎಚ್.ಮುದಕಣ್ಣನವರ, ಎಂ.ಬಿ.ಆರೀಕಟ್ಟಿ, ಎಸ್.ಬಿ.ಮುಳಗುಂದ, ಕೆ.ವಿ.ಕಂಬಾಳಿಮಠ, ಪುಷ್ಪಾ ಕೆರೂಡಿ, ವಿ.ಆರ್.ಪಾಟೀಲ, ಐ.ಎಸ್.ಕಲಾದಗಿ ವಿದ್ಯಾರ್ಥಿಗಳು ಇದ್ದರು.