ಎಚ್.ಡಿ.ಕೋಟೆ: ತಾಲ್ಲೂಕಿನ ಜಕ್ಕಳ್ಳಿ ಮಾಳದ ಗಿರಿಜನ ಆಶ್ರಮ ಶಾಲೆಯಲ್ಲಿ ಮಂಗಳವಾರ ಬೆಳಿಗ್ಗೆ ಉಪಹಾರ ಸೇವಿಸಿದ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ.ಶಾಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಬಿಸಿಬೇಳೆ ಬಾತ್ ತಿಂದ ನಂತರ ಕೆಲವು ಮಕ್ಕಳು ವಾಂತಿ ಮಾಡಿಕೊಂಡರೆ, ಇನ್ನು ಕೆಲವು ಮಕ್ಕಳು ಹೊಟ್ಟೆ ನೋವಿನಿಂದ ನರಳುತ್ತಿದ್ದವು. ಆಗ ಸ್ಥಳೀಯರ ನೆರವಿನಿಂದ 40ಕ್ಕೂ ಹೆಚ್ಚು ಮಕ್ಕಳನ್ನು ಖಾಸಗಿ ಜೀಪ್ನಲ್ಲಿ ಕೆಂಚನಹಳ್ಳಿಯಲ್ಲಿರುವ ಸ್ವಾಮಿ ವಿವೇಕಾನಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ಚಿಕಿತ್ಸೆಯ ನಂತರ 30 ಮಕ್ಕಳು ಆರೋಗ್ಯವಾಗಿದ್ದು, ಇನ್ನುಳಿದ 10 ಮಕ್ಕಳೂ ಅಪಾಯದಿಂದ ಪಾರಾಗಿದಾರೆ. ಹಾಗೂ ಆಶ್ರಮ ಶಾಲೆಯ ವಾರ್ಡನ್ ಕೀರ್ತಿಕುಮಾರ್ಗೆ ನೋಟಿಸ್ ನೀಡಿ ಹೆಚ್ಚಿನ ವಿವರಣೆ ಪಡೆದು ಸೂಕ್ತ ಕ್ರಮ ಕೈಗೊಳ್ಳು ವುದಾಗಿ ಸಮಾಜ ಕಲ್ಯಾಣಾಧಿಕಾರಿ ಸಫಿರ್ ತಿಳಿಸಿದ್ದಾರೆ.‘ಆಶ್ರಮ ಶಾಲೆಯ ಆಹಾರ ಪದಾರ್ಥಗಳು ಮತ್ತು ನೀರನ್ನು ಹೆಚ್ಚಿನ ಪರೀಕ್ಷೆಗಾಗಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸ ಲಾಗಿದೆ’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಶಾಸಕ ಚಿಕ್ಕಣ್ಣ ಮಕ್ಕಳಿಗೆ ಸಮಾಧಾನ ಹೇಳಿ ವಾರ್ಡನ್ ಮತ್ತು ಅಡುಗೆಯವರಿಗೆ ತರಾಟೆ ತೆಗೆದು ಕೊಂಡರು. ಇನ್ನು ಮುಂದೆ ಈ ರೀತಿ ಸಮಸ್ಯೆ ಉಂಟಾಗದ ರೀತಿ ನೋಡಿ ಕೊಳ್ಳಬೇಕು ಎಂದು ಆದೇಶಿಸಿದರು. ಆಶ್ರಮ ಶಾಲೆಗೆ ಮಂಡ್ಯದ ಎಂ.ಎಂ. ಟ್ರೇಡರ್ಸ್ನವರು ಕಳಪೆ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿರುವುದೇ ಘಟನೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.