ಬೆಂಗಳೂರು: ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಮಳೆಗಾಲದಿಂದಾಗಿ ರಸ್ತೆಗಳ ಗುಂಡಿಗಳು ಹೆಚ್ಚಾಗಿದ್ದು ನಗರದ ವಾಹನ ಸವಾರರು ನಿತ್ಯ ರಸ್ತೆಗಳ ಮೇಲೆ ತೊಂದರೆ ಅನುಭವಿಸುವಂತಾಗಿದೆ.
`ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಅವುಗಳನ್ನು ಮುಚ್ಚುವ ಬಗ್ಗೆ ಯಾರೂ ಕ್ರಮ ಕೈಗೊಂಡಿಲ್ಲ. ಪ್ರತಿ ಮಳೆಗಾಲದಲ್ಲೂ ವಾಹನಗಳು ಅಂಗಡಿ ಮೇಲೆ ನೀರು ಸಿಡಿಸಿಯೇ ಹಾದು ಹೋಗುತ್ತವೆ' ಎಂದು ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಸೈಕಲ್ ರಿಪೇರಿ ಅಂಗಡಿ ಇಟ್ಟುಕೊಂಡಿರುವ ಜಯಣ್ಣ ದೂರಿದರು.
ಉತ್ತರಹಳ್ಳಿ ಮಾತ್ರವಲ್ಲದೇ, ಚರ್ಚ್ಸ್ಟ್ರೀಟ್, ಕಸ್ತೂರ ಬಾ ರಸ್ತೆ, ಇನ್ಫೆಂಟ್ರಿ ರಸ್ತೆ, ಕನ್ನಿಂಗ್ಹ್ಯಾಂ, ಎಂ.ಜಿ.ರಸ್ತೆ, ಹಳೇ ಮದ್ರಾಸ್ ರಸ್ತೆ, ಕೋರಮಂಗಲ, ಕುಮಾರಸ್ವಾಮಿ ಲೇಔಟ್, ಬನಶಂಕರಿ, ಕನಕಪುರ ರಸ್ತೆ ಸೇರಿದಂತೆ ನಗರದ ಬಹುತೇಕ ಕಡೆ ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ಮಾತ್ರವಲ್ಲದೇ, ಬಿಬಿಎಂಪಿ, ಜಲಮಂಡಳಿ ಕಾಮಗಾರಿ ಪ್ರಗತಿ ಸವಾರರು ವಾಹನ ದಟ್ಟಣೆಯಿಂದ ಪರದಾಡುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಲಕ್ಷ್ಮಿನಾರಾಯಣ, `ನಗರದ ಪ್ರಮುಖ 25 ರಸ್ತೆಗಳನ್ನು `ಗುಂಡಿ ಮುಕ್ತ' ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಬೈಯ್ಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆ ನಡುವೆ ಕಾಮಗಾರಿ ಆರಂಭವಾಗಿದೆ' ಎಂದು ಹೇಳಿದರು.
`ನಗರದಲ್ಲಿ ಪ್ರಸ್ತುತ 12,500 ಗುಂಡಿಗಳಿದ್ದು, ಆ ಗುಂಡಿಗಳನ್ನು ಮುಚ್ಚಲು ಪ್ರತಿ ವಾರ್ಡ್ಗೆ ಐದು ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕೆಪಿಟಿಸಿಎಲ್ ಮತ್ತು ಜಲಮಂಡಳಿ ಕಾಮಗಾರಿಯ ಹೆಸರಿನಲ್ಲಿ ರಸ್ತೆಯನ್ನು ಹಾಳು ಮಾಡುವುದಿಲ್ಲ ಎಂದು ಭರವಸೆ ನೀಡಬೇಕು' ಎಂದು ಅವರು ತಿಳಿಸಿದರು.
`ರಸ್ತೆಗಳು ಹಾಳಾಗುತ್ತಿರುವುದಕ್ಕೆ ಗುತ್ತಿಗೆದಾರರೇ ಕಾರಣ. ರಸ್ತೆಗಳನ್ನು ನಿರ್ಮಾಣ ಮಾಡುವುದು ಮಾತ್ರ ಅವರ ಕೆಲಸವಲ್ಲ. ಜತೆಗೆ ಅದರ ನಿರ್ವಹಣೆ ಹೊಣೆ ಕೂಡ ಅವರ ಮೇಲಿರುತ್ತದೆ ಎಂಬುದನ್ನು ಟೆಂಡರ್ನಲ್ಲಿ ತಿಳಿಸಲಾಗಿರುತ್ತದೆ ಎಂದು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.