ಆಲಮೇಲ: ಕಳೆದ ಜೂನ್27ರಂದು ಸಮೀಪದ ದೇವಣಗಾಂವ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಶರಣಪ್ಪ ಕಣಮೇಶ್ವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೇವಣಗಾಂವ ಗ್ರಾಮದ ಯುವರಾಜ ಢಾಳೆ, ಚಂದ್ರಕಾಂತ ಕಣಮೇಶ್ವರ, ಬೊಮ್ಮನಳ್ಳಿ ಗ್ರಾಮದ ರಮೇಶ ಧೂಳಬಾ ಬಂಧಿತ ಆರೋಪಿಗಳು.
ಗ್ರಾಮ ಪಂಚಾಯಿತಿ ಚುನಾವಣೆ, ಮರಳು ದಂಧೆ, ಹಾಗೂ ಹಳೆಯ ದ್ವೇಷದಿಂದಾಗಿ ಈ ಕೊಲೆ ಯತ್ನ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸದರಿ ಘಟನೆಯಲ್ಲಿ ಗಾಯಗೊಂಡಿರುವ ಶರಣಪ್ಪ ಈಗ ಚೇತರಿಸಿಕೊಳ್ಳುತ್ತಿದ್ದು, ಮುಖ್ಯ ಆರೋಪಿಯೂ ಆಗಿರುವ ಶರಣಪ್ಪನ ಅಕ್ಕನ ಮಗ ರಮೇಶ ಚೌಡಪ್ಪ ಧೂಳಬಾ ಇತರೆ ಇಬ್ಬರು ಆರೋಪಿಗಳೊಂದಿಗೆ ಈ ಕೃತ್ಯ ಎಸೆಗಿದ್ದಾನೆ.
ಸದರಿ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿರುವ ಡಿಎಸ್ಪಿ ಬಿ.ಎನ್.ಅಂಬಿಗೇರ, ಸಿಂದಗಿ ವೃತ್ತದ ಸಿಪಿಐ ಬಸವರಾಜ್ ಯಲಿಗಾರ, ಪಿಎಸ್ಐ ಮಹಾದೇವ ಯಲಿಗಾರ, ಸ್ಥಳೀಯ ಠಾಣೆಯ ಪಿಎಸ್ಐ ಗೋಪಾಲ ಹಳ್ಳೂರ ಅವರನ್ನು ಒಳಗೊಂಡ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಶ್ಲಾಘಿಸಿದ್ದಾರೆ.