ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡು ಹಾರಿಸಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ

Last Updated 17 ಏಪ್ರಿಲ್ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು:   ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಜನನಿಬಿಡ ಪ್ರದೇಶದಲ್ಲೇ ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಮೂಡಲಪಾಳ್ಯದ ಸಂಜೀವಿನಿನಗರ 3ನೇ ಅಡ್ಡರಸ್ತೆಯಲ್ಲಿ ಭಾನುವಾರ ಹಾಡಹಗಲೇ ನಡೆದಿದೆ. ಕೆಂಗೇರಿ ಬಳಿಯ ಕೋಡಿಪಾಳ್ಯ ನಿವಾಸಿ ಬಿ.ನಂಜುಂಡಪ್ಪ ಕೊಲೆಯಾದವರು. ಸ್ನೇಹಿತರನ್ನು ಭೇಟಿ ಮಾಡುವ ಸಲುವಾಗಿ ಅವರು ಸಂಜೆ 4.30ರ ಸುಮಾರಿಗೆ ಸಂಜೀವಿನಿನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ನಂಜುಂಡಪ್ಪ ಅವರು ಸ್ನೇಹಿತರ ಮನೆಯ ಸಮೀಪವೇ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಅದೇ ವೇಳೆಗೆ ಅಲ್ಲಿಗೆ ಬಂದ ಅಕ್ರಮ್ ಎಂಬಾತನ ಸಹಚರರು ಅವರ ಮೇಲೆ ಪಿಸ್ತೂಲ್‌ನಿಂದ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾದರು. ಗುಂಡು ಅವರ ಎದೆಗೆ ತಗುಲಿ ತೀವ್ರ ರಕ್ತಸ್ರಾವವಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿ, ‘ಅಕ್ರಮ್‌ನ ಸಹೋದರ ಇರ್ಫಾನ್ ಅಲಿಯಾಸ್ ನಿಹಾಲ್ ಎಂಬಾತನನ್ನು ಕಾರು ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 2010ರಲ್ಲಿ ಬಂಧಿಸಲಾಗಿತ್ತು. ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ. ನಂಜುಂಡಪ್ಪ ಅವರು ನಿಹಾಲ್‌ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಬಂಧಿಸಲು ನೆರವಾಗಿದ್ದಾರೆ ಎಂದು ತಿಳಿದು ಅಕ್ರಮ್ ಕೋಪಗೊಂಡಿದ್ದ. ಈ ಹಿನ್ನೆಲೆಯಲ್ಲಿ ಆತ ಸಹಚರರಿಂದ ಅವರನ್ನು ಕೊಲೆ ಮಾಡಿಸಿದ್ದಾನೆ’ ಎಂದರು.

‘ನಂಜುಂಡಪ್ಪ ಅವರ ಸ್ನೇಹಿತ ರಿಯಲ್ ಎಸ್ಟೇಟ್ ಉದ್ಯಮಿ ಧನರಾಜ್ ಎಂಬುವರ ಮೇಲೂ ಅಕ್ರಮ್ ಮತ್ತು ಸಹಚರರು ಶುಕ್ರವಾರವಷ್ಟೇ ಗುಂಡಿನ ದಾಳಿ ನಡೆಸಿದ್ದರು. ಧನರಾಜ್ ಅವರು ಸಹೋದರ ನಿಹಾಲ್‌ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಶಂಕಿಸಿ ಅಕ್ರಮ್ ಈ ಕೃತ್ಯ ಎಸಗಿದ್ದ. ಅಕ್ರಮ್‌ಗೆ ಪಿಸ್ತೂಲ್ ಕೊಟ್ಟಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

‘ಅಕ್ರಮ್‌ನ ವಿರುದ್ಧ ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 45ಕ್ಕೂ ಹೆಚ್ಚು ಕಾರು ಕಳವು ಪ್ರಕರಣಗಳಿವೆ. ಅಲ್ಲದೇ ಆತನ ಬಂಧನಕ್ಕೆ ಕೇರಳ ಮತ್ತು ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳು ವಾರೆಂಟ್ ಸಹ ಜಾರಿ ಮಾಡಿದ್ದವು’ ಎಂದು ಬಿದರಿ       ಅವರು ಹೇಳಿದರು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಸಂಜೀವಿನಿನಗರದಲ್ಲಿ ಜಮಾಯಿಸಿದರು, ಮನೆಯ ಮಹಡಿ ಮೇಲೆ ಹತ್ತಿದ ಜನರು ಘಟನಾ ಸ್ಥಳವನ್ನು ವೀಕ್ಷಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಮೂರು ದಿನಗಳ ಅಂತರದಲ್ಲಿ ಎರಡು ಗುಂಡಿನ ದಾಳಿ ಪ್ರಕರಣಗಳು ನಡೆದಿರುವುದರಿಂದ ರಾಜಧಾನಿಯ ಜನರು ಆತಂಕಕ್ಕೀಡಾಗಿದ್ದಾರೆ.
ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್, ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲಿಸಿದರು.
 

ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವನಜಾಕ್ಷಿ ಎಂಬುವರನ್ನು ವಿವಾಹವಾಗಿದ್ದ ನಂಜುಂಡಪ್ಪ ಅವರಿಗೆ ಅಜಯ್ ಮತ್ತು ಕಲಾರಾಣಿ ಎಂಬ ಇಬ್ಬರು ಮಕ್ಕಳಿದ್ದಾರೆ.

ಮಧ್ಯಾಹ್ನವಷ್ಟೇ ಜತೆಗಿದ್ದ: ‘ಸ್ನೇಹಿತ ಮುನಿರಾಜು ಎಂಬುವರು ಕೆಂಗೇರಿ ಉಪನಗರದಲ್ಲಿ ಕಟ್ಟಿಸಿರುವ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಬಂದಿದ್ದ ನಂಜುಂಡಪ್ಪ ಮಧ್ಯಾಹ್ನ ನನ್ನ ಜತೆಯಲ್ಲೇ ಇದ್ದರು. ಸಮಾರಂಭ ಮುಗಿದ ಬಳಿಕ ಅವರು ಮನೆಗೆ ಹೋದರು. ಸಂಜೆ ಅವರ ಮೇಲೆ ಗುಂಡಿನ ದಾಳಿ ನಡೆದಿರುವುದು ಗೊತ್ತಾಯಿತು’ ಎಂದು ನಂಜುಂಡಪ್ಪ ಅವರ ಸ್ನೇಹಿತ ಕಾಳೇಗೌಡ ಹೇಳಿದರು.

‘ಅವರು ಸುಮಾರು 20 ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಬಿಜೆಪಿ ಪಕ್ಷದಲ್ಲಿ ಕಾಯಕರ್ತರಾಗಿದ್ದ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರಿದ್ದರು’ ಎಂದು ಕಾಳೇಗೌಡ ತಿಳಿಸಿದರು.

ಅಕ್ರಮ್ ಮನೆಗೆ ಬೆಂಕಿ: ನಂಜುಂಡಪ್ಪ ಅವರ ಸಾವಿನ ಸುದ್ದಿ ತಿಳಿದು ಉದ್ರಿಕ್ತರಾದ ಮೃತರ ಸಂಬಂಧಿಕರು ಕೋಡಿಪಾಳ್ಯದಲ್ಲಿರುವ ಅಕ್ರಮ್‌ನ ಮನೆಗೆ ರಾತ್ರಿ 10.30ರ ಸುಮಾರಿಗೆ ಬೆಂಕಿ ಹಚ್ಚಿದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ಆದರೆ ಸಿಬ್ಬಂದಿಯ ಕಾರ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಉದ್ರಿಕ್ತರು ಬೆಂಕಿ ನಂದಿಸಲು ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಉದ್ರಿಕ್ತರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಕೂಡಲೇ ಸ್ಥಳಕ್ಕೆ ಬಂದ ಬಿಡದಿ ಪೊಲೀಸರು ಉದ್ರಿಕ್ತರೊಂದಿಗೆ ಮಾತುಕತೆ ನಡೆಸಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT