ಘಟಪ್ರಭಾ (ಗೋಕಾಕ): ಇಲ್ಲಿಯ ಅರಭಾವಿಯ ಪ್ರಸಿದ್ಧ ಮಾರುತಿ ದೇವರ ಕಾರ್ತಿಕೋತ್ಸವ ಆಚರಣೆ ನಿಮಿತ್ತ ಗುಂಡು ಕಲ್ಲನ್ನು ಎತ್ತುವ ಸ್ಫರ್ಧೆ ನಡೆಯಿತು. ಇದರಿಂದ ಪ್ರೇಕ್ಷಕರಿಗೆ ಸಾಹಸಮಯ ಗ್ರಾಮೀಣ ಕ್ರೀಡೆಯನ್ನು ವೀಕ್ಷಿಸುವ ಭಾಗ್ಯ ದೊರಕಿತು. ಸ್ಪರ್ಧೆಯಲ್ಲಿ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 30ಕ್ಕೂ ಅಧಿಕ ಸ್ಫರ್ಧಾಳುಗಳು ಭಾಗವಹಿಸಿದ್ದರು.
ಗುಂಡುಕಲ್ಲಿನ ಭಾರ ಎತ್ತುವ ಸ್ಪರ್ಧೆಯಲ್ಲಿ ಸುಮಾರು 185ಕೆ.ಜಿ. ತೂಕದ ಗುಂಡು ಕಲ್ಲನ್ನು ಹೆಗಲ ಮೇಲೆ ಏರಿಸಿಕೊಂಡ ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಗೊಲಭಾಂವಿಯ ಬಸಪ್ಪ ಸದಾಶಿವ ಕರಿಗಾರ ಪ್ರಥಮ ಸ್ಥಾನ ಪಡೆದರು. 150 ಕೆ.ಜಿ. ಭಾರದ ಗುಂಡುಕಲ್ಲನ್ನು ಎತ್ತಿದ ಸ್ಥಳೀಯ ರಾಜು ಸದಾಶಿವ ಕರಿಗಾರ ದ್ವೀತಿಯ ಹಾಗೂ ತಾಲ್ಲೂಕಿನ ಲೋಳಸೂರ ಗ್ರಾಮದ ಸಿದ್ದಪ್ಪ ಜೋಡಟ್ಟಿ ತೃತೀಯ ಸ್ಥಾನ ಪಡೆದರು.