ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ರಾಜ್ಯದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ತಾಲ್ಲೂಕಿನಲ್ಲಿ ಗುಟ್ಕಾ ಮತ್ತು ಪಾನ್ಮಸಾಲಾ ತಯಾರಿಕೆಯ ಎರಡು ಕಾರ್ಖಾನೆಗಳಿಗೆ ಸೋಮವಾರ ಬೀಗಮುದ್ರೆ ಹಾಕಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಬೆಳಗಾವಿ ಜಿಲ್ಲಾ ಅಂಕಿತ ಅಧಿಕಾರಿ ಡಾ.ಜಗದೀಶ ನುಚ್ಚಿನ್, ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ಎಂ.ಎಸ್. ಬೆಕ್ಕೇರಿ ಅವರು ತಾಲ್ಲೂಕಿನ ನಿಪ್ಪಾಣಿ ಪಟ್ಟಣದ ಬೀರೂಬಾಮಾಳ ಹಾಗೂ ಅಪ್ಪಾಚಿವಾಡಿ ಬಳಿಯಿರುವ ಗುಟ್ಕಾ ಕಾರ್ಖಾನೆಗಳ ಪರಿಶೀಲನೆ ನಡೆಸಿದಾಗ, ಕಾರ್ಖಾನೆಯಲ್ಲಿ ಗುಟ್ಕಾ ತಯಾರಿಕೆಗೆ ಬಳಸಲಾಗುವ ಕಚ್ಚಾ ಸಾಮಗ್ರಿಗಳು ಹಾಗೂ ಕೆಲವು ಗುಟ್ಕಾ ಪ್ಯಾಕೆಟ್ಗಳು ದೊರೆತ ಹಿನ್ನ್ನೆಲೆಯಲ್ಲಿ ಎರಡೂ ಕಾರ್ಖಾನೆಗಳಿಗೆ ಬೀಗ ಮುದ್ರೆ ಹಾಕಿದರು.
ಕಾರ್ಖಾನೆಯಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ ಬಳಸುವ ಕಚ್ಚಾ ಸಾಮಗ್ರಿಗಳು ಮತ್ತು ಕೆಲವು ಕೆಲವು ಗುಟ್ಕಾ, ಪಾನ್ಮಸಾಲಾ ಪ್ಯಾಕೆಟ್ಗಳು ದೊರೆತ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಗೆ ಬೀಗ ಹಾಕಲಾಗಿದೆ' ಎಂದು ಡಾ.ಜಗದೀಶ ನುಚ್ಚಿನ್ `ಪ್ರಜಾವಾಣಿ'ಗೆ ತಿಳಿಸಿದರು.
`ಚಿಕ್ಕೋಡಿ ತಾಲ್ಲೂಕಿನಲ್ಲಿ ಒಟ್ಟು ಮೂರು ಗುಟ್ಕಾ ಕಂಪೆನಿ ಕಾರ್ಖಾನೆಗಳಿದ್ದು, ಆ ಪೈಕಿ ಸೋಮವಾರ ಎರಡು ಕಾರ್ಖಾನೆಗಳ ಪರಿಶೀಲನೆ ನಡೆಸಿ ಬೀಗ ಮುದ್ರೆ ಹಾಕಲಾಗಿದೆ. ಇನ್ನುಳಿದ ಒಂದು ಕಾರ್ಖಾನೆಯ ಪರಿಶೀಲನೆಯನ್ನೂ ನಡೆಸಲಾಗುವುದು' ಎಂದರು. ಇದಕ್ಕೂ ಮೊದಲೇ ಮೇ 31ರಂದೇ ಕೇಂದ್ರ ಅಬಕಾರಿ ಅಧಿಕಾರಿಗಳು ಕಾರ್ಖಾನೆಯ ಯಂತ್ರೋಪಕರಣ, ಗೋದಾಮು ಮತ್ತಿತರ ಘಟಕಗಳಿಗೆ ಬೀಗ ಮುದ್ರೆ ಹಾಕಿರುವುದೂ ಕಂಡುಬಂತು.