ದಾವಣಗೆರೆ: ರಾಜ್ಯ ಸರ್ಕಾರ ಅಡಿಕೆಗೆ ಉತ್ತಮ ಧಾರಣೆ ಇರುವ ಸಮಯದಲ್ಲಿಯೇ ದಿಢೀರನೆ ಗುಟ್ಕಾ ನಿಷೇಧ ಮಾಡಿರುವುದು ಸರಿಯಲ್ಲ ಎಂದು ಕೃಷಿ ಪಂಪ್ಸೆಟ್ ಹಾಗೂ ಅಡಿಕೆ ಬೆಳೆಗಾರರ ಸಂಘದ ಸಂಚಾಲಕ ಎಸ್.ಎಂ.ಗೌಡ ಹೇಳಿದರು.
ಆರೋಗ್ಯಕ್ಕೆ ಹಾನಿಕರ ಎಂಬ ನೆಪವೊಡ್ಡಿ ಗುಟ್ಕಾ ನಿಷೇಧಿಸಲಾಗಿದೆ. ಆದರೆ, ಸಿಗರೇಟು, ಮದ್ಯ ನಿಷೇಧ ಮಾಡಿಲ್ಲ. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರ ಮೇಲೆ ಗದಾಪ್ರಹಾರ ಮಾಡಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಸತತ 2 ವರ್ಷ ಬರಗಾಲದಿಂದ ಅಂತರ್ಜಲ ಬತ್ತಿ ಕೊಳವೆ ಬಾವಿ ವಿಫಲವಾಗುತ್ತಿವೆ. ಹಳದಿ, ಹಿಡಿಮುಂಡಿಗೆ ರೋಗಗಳಿಂದ ತೋಟಗಳು ಹಾಳಾಗುತ್ತಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿರುವ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಗುಟ್ಕಾ ನಿಷೇಧ ಮಾಡಿರುವುದು ರೈತರಿಗೆ ಆಘಾತಕಾರಿಯಾಗಿದೆ ಎಂದು ಹೇಳಿದರು.
ಗೋರಕ್ ಸಿಂಗ್ ವರದಿಯ ಶಿಫಾರಸ್ಸಿನಲ್ಲಿ ಅಡಿಕೆ ಬೆಳೆಗಾರರಿಗೆ ನೀಡುವ ಸೌಲಭ್ಯಗಳಿಗೆ ಮಲೆನಾಡಿನ ಅಡಿಕೆ ಬೆಳೆಗಾರರ ಜತೆಗೆ ಬಯಲುಸೀಮೆಯ ಅಡಿಕೆ ಬೆಳೆಗಾರರನ್ನೂ ಒಳಪಡಿಸಬೇಕು. ಅವರಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು. ಅಡಿಕೆ ಅಭಿವೃದ್ಧಿಗೆ ಪಡೆದಿರುವ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಜಿ. ಷಡಾಕ್ಷರಪ್ಪ, ಎಸ್.ಎಸ್. ಸುರೇಶ್, ಕೆ.ಜಿ.ಗಂಗಾಧರ ಕಬ್ಬೂರು, ರೇವಣಸಿದ್ದಪ್ಪ, ಚಂದ್ರಪ್ಪ, ಎಚ್.ಜಿ.ಮರುಳಸಿದ್ಧಪ್ಪ ಇದ್ದರು.