ನವದೆಹಲಿ(ಐಎಎನ್ಎಸ್): ಆಹಾರ ಸುರಕ್ಷತೆ ಕುರಿತ ಸರ್ಕಾರದ ನೂತನ ಮಾರ್ಗಸೂಚಿಯಲ್ಲಿ ಗುಟ್ಕಾ ಹಾಗೂ ಪಾನ್ಮಸಾಲಗಳಂಥ ಜಗಿಯುವ ತಂಬಾಕು ಉತ್ಪನ್ನಗಳನ್ನು `ನಿಷೇಧಿತ ಆಹಾರ~ ಉತ್ಪನ್ನಗಳ ಪಟ್ಟಿಗೆ ಸೇರಿಸಲಾಗಿದೆ.
ಈ ಹೊಸ ಮಾರ್ಗಸೂಚಿಯಿಂದ ಭಾರತದ 8 ಸಾವಿರ ಕೋಟಿ ರೂಪಾಯಿ ವಹಿವಾಟಿನ ಗುಟ್ಕಾ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಂತಾಗಿದೆ. ಆದರೆ ದೇಶದಲ್ಲಿ ಬಾಯಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ಕ್ರಮವನ್ನು ಆಹಾರ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಯಾವುದೇ ಆಹಾರ ಉತ್ಪನ್ನದಲ್ಲಿ ತಂಬಾಕು ಬಳಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಈ ಸಂಬಂಧ ಆರೋಗ್ಯ ಸಚಿವಾಲಯದ ಅಡಿ ಬರುವ ಭಾರತ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿದೆ. `ಗುಟ್ಕಾ ಅಥವಾ ಪಾನ್ ಮಸಾಲವನ್ನು ಇತರ ಆಹಾರ ಪದಾರ್ಥಗಳಂತೆಯೇ ಬಳಸಲಾಗುತ್ತದೆ.
ಹಾಗಾಗಿ ಇವುಗಳನ್ನು ಆಹಾರ ಪದಾರ್ಥಗಳೆಂದೇ ಕರೆಯಲಾಗುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ನಿಷೇಧಿಸಲಾಗಿದೆ~ ಎಂದು ಎಫ್ಎಸ್ಎಸ್ಎಐ ನಿರ್ದೇಶಕ ವಿ.ಎನ್.ಗೌರ್ ಹೇಳಿದ್ದಾರೆ.
ಘೋದಾವತ್ ಪಾನ್ ಮಸಾಲ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು.ಜಗಿಯುವ ತಂಬಾಕು ಹಾಗೂ ಪಾನ್ ಮಸಾಲ ಪ್ಯಾಕ್ಗಳ ತಯಾರಿಕೆಗೆ ಪ್ಲಾಸ್ಟಿಕ್ ಬಳಸಕೂಡದು ಎಂದು ಮಾರ್ಚ್ 1ರಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎನ್ನುವುದು ಆಹಾರ ಕಾರ್ಯಕರ್ತರ ಆರೋಪವಾಗಿದೆ.