ಗುಡಗೇರಿ: ಇಲ್ಲಿಯ ಶ್ರೀ ಪರ್ವತೇಶ್ವರ ಮಹಾರಥೋತ್ಸವ ಮಂಗಳವಾರ (ಫೆ.21) ರಂದು ನಡೆಯಲಿದೆ.
ಸುಮಾರು 8ನೇ ಶತಮಾನದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲಾಗಿದ್ದ ಈ ದೇವಸ್ಥಾನದ ಶಿಥಿಲಗೊಂಡಿದ್ದರಿಂದ ಭಕ್ತರೆಲ್ಲ ಸೇರಿಕೊಂಡು ಜೀರ್ಣೋದ್ಧಾರ ಮಾಡಿದ್ದಾರೆ.
1995ರಲ್ಲಿ ಭಕ್ತರು ಸೇರಿಕೊಂಡು ಶ್ರೀ ಪರ್ವತೇಶ್ವರ ಹಾಗೂ ದೇವಿಗೌರಿ ದೇವಸ್ಥಾನ ವಿಶ್ವಸ್ಥ ಸಮಿತಿ ರಚಿಸಿಕೊಂಡರು. ಅಧ್ಯಕ್ಷರಾಗಿ ವೀರೂಪಾಕ್ಷಗೌಡ ದ್ಯಾವನಗೌಡ್ರ ಆಯ್ಕೆಯಾದರು. ಈಶ್ವರಪ್ಪ ಹರಕುಣಿ, ಶಿವಪ್ಪ ಉಪ್ಪಿನ, ಬಾಬಣ್ಣ ಮಧಬಾವಿ, ಎಪ್.ಎಸ್.ತಿಮ್ಮನಗೌಡ್ರ, ಮಲ್ಲನಗೌಡ ಯತ್ನಳ್ಳಿ, ಬಸವರಾಜ ಹರಕುಣಿ, ಬಸವರಾಜ ಕುಂದಗೋಳ, ಶೇಖಪ್ಪ ಮಡಿವಾಳ ಮತ್ತಿತರರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪಣ ತೊಟ್ಟರು.
ಸುಮಾರು 13 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಜೀರ್ಣೋದ್ಧಾರಕ್ಕೆ ಮುಂದಾದಾಗ, ಸರ್ಕಾರದಿಂದ (ಮುಜರಾಯಿ ಇಲಾಖೆ) 1.50 ಲಕ್ಷ ರೂ. ಬಿಡುಗಡೆಯಾಯಿತು. ಆದರೂ ಧೃತಿಗೆಡದೆ ಜೀರ್ಣೋದ್ಧಾರ ಕೆಲಸವನ್ನು ಮುಂದುವರಿಸಲಾಯಿತು. 1998ರಲ್ಲಿ ದೇವಸ್ಥಾನ ಕೆಲಸ ಪೂರ್ಣಗೊಂಡಿತು.
ನಂತರ ಭಕ್ತರ ನೆರವಿನಿಂದ 2003ರಲ್ಲಿ ರಥ ಸಿದ್ಧಪಡಿಸಿದ್ದು, ಅಂದಿನಿಂದ ರಥೋತ್ಸವ ತಪ್ಪದೇ ನಡೆದುಕೊಂಡುಬಂದಿದೆ. ಶಿವರಾತ್ರಿ ಅಮವಾಸ್ಯೆ ದಿನದಂದು ರಥೋತ್ಸವ ನಡೆಯುತ್ತದೆ ಎಂದು ಸಮಿತಿಯ ಅಧ್ಯಕ್ಷ ಈಶ್ವರಪ್ಪ ಹರಕುಣಿ `ಪ್ರಜಾವಾಣಿ~ ಪ್ರತಿನಿಧಿಗೆ ತಿಳಿಸಿದ್ದಾರೆ.