ಹೊಳೆನರಸೀಪುರ: ಪಟ್ಟಣದ ಅಂಬೇಡ್ಕರ್ ಬಡಾವಣೆಯಲ್ಲಿ ಬುಧವಾರ ರಾತ್ರಿ ಎರಡು ಗುಡಿಸಲುಗಳಿಗೆ ಬೆಂಕಿ ಬಿದ್ದಿದ್ದು ದನಕರುಗಳು, ಬೈಕ್, ಅಡಕೆ ಗೋಟು ಸೇರಿದಂತೆ ರೂ. 4 ಲಕ್ಷ ಮೌಲ್ಯದ ವಸ್ತುಗಳು ನಾಶವಾಗಿವೆ.
ಬಡಾವಣೆಯ ವೆಂಕಟೇಶ ಮತ್ತು ಅಶ್ವತ್ ಎಂಬುವವರ ಗುಡಿಸಲುಗಳಿಗೆ ಬೆಂಕಿ ಬಿದ್ದಿದ್ದು 2 ಹಸು, 1 ಎಮ್ಮೆ ಕರು, 1 ಆಡು, ಎರಡು ಬೈಕ್ಗಳು ಸಂಪೂರ್ಣ ಸುಟ್ಟುಹೋಗಿದ್ದು, 1 ಹಸು, 1 ಎಮ್ಮೆ, 1 ಕರುವಿಗೆ ಬೆಂಕಿ ತಗುಲಿ ಸುಟ್ಟಗಾಯಗಳಾಗಿವೆ. ಗುಡಿಸಲಿನಲ್ಲಿದ್ದ ಟ್ರ್ಯಾಕ್ಟರ್ ಟೈರ್ಗಳು, ನೀರಿನ ಪೈಪ್ಗಳು, ಮೋಟಾರು, ಅಡಕೆ ಗೋಟಿನ ಚೀಲಗಳೂ ಸುಟ್ಟು ಹೋಗಿದ್ದು ಒಟ್ಟಾರೆ 4 ಲಕ್ಷ ರೂಪಾಯಿಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಈ ಕೃತ್ಯದ ಹಿಂದೆ ಕಿಡಿಗೇಡಿಗಳ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಬಿದ್ದ ಸಮಯದಲ್ಲಿ ಗುಡಿಸಲಿನ ಸುತ್ತ ತಿರುಗಾಡುತ್ತಿದ್ದ ಇಬ್ಬರು ಯುವಕರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಕೂಡಲೇ ಆರೋಪಿಗಳನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಆರ್. ಹರೀಶ್ ಆಗ್ರಹಿಸಿದ್ದಾರೆ. ಬಡಾವಣೆಯ ಜನರು ಬೆಂಕಿ ನಂದಿಸಲು ಶ್ರಮಪಟ್ಟ್ದ್ದಿದಲ್ಲದೇ ನಂತರ ಅಗ್ನಿಶಾಮಕ ಸಿಬ್ಬಂದಿಯೂ ಆಗಮಿಸಿ ಬೆಂಕಿ ಆರಿಸಿದರು. ಸಬ್ಇನ್ಸ್ಪೆಕ್ಟರ್ ಚಿಕ್ಕಣ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.