ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಮಳೆ ಸುರಿದ ಪರಿಣಾಮ ಕೆಲವೆಡೆ ಮರಗಳು ಧರೆಗುರುಳಿದವು. ಇದೇ ವೇಳೆ ವಿವಿಧ ಬಡಾವಣೆಗಳಲ್ಲಿ ರಸ್ತೆಗೆ ನೀರು ನುಗ್ಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು.
ಮಹದೇವಪುರ, ದ್ವಾರಕನಗರ, ಚಲ್ಲಘಟ್ಟ, ಹೊಸಕೆರೆಹಳ್ಳಿಯಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.
ವಿವೇಕನಗರ, ಶಾಮಣ್ಣ ಗಾರ್ಡನ್, ಪಟ್ಟೇಗಾರ ಪಾಳ್ಯ, ದೊಮ್ಮಲೂರಿನಲ್ಲಿ ರಸ್ತೆಗೆ ನೀರು ನುಗ್ಗಿ ವಾಹನಗಳ ಓಡಾಟಕ್ಕೆ ಅಡ್ಡಿಯಾಯಿತು. ಮ್ಯಾನ್ಹೋಲ್ಗಳಿಂದ ನೀರು ನುಗ್ಗಿದ ಪರಿಣಾಮ ವಾಹನ ಚಾಲಕರು, ಪಾದಚಾರಿಗಳಿಗೆ ತೊಂದರೆ ಉಂಟಾಯಿತು. ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ನಡೆಸಿದರು. ಚಲ್ಲಘಟ್ಟದಲ್ಲಿ ಮನೆ ಮೇಲೆ ಭಾಗಶಃ ಬಿದ್ದಿದ್ದ ಮರವೊಂದನ್ನು ತೆರವುಗೊಳಿಸಲಾಯಿತು.
ನಗರದ ಒಳ ಭಾಗದಲ್ಲಿ 19.4 ಮಿ.ಮೀ ಮಳೆ ಸುರಿದಿದ್ದು, ಎಚ್ಎಎಲ್ ವಿಮಾನ ನಿಲ್ದಾಣದ ಸುತ್ತಮುತ್ತ 22.0 ಮಿ.ಮೀ ಮಳೆಯಾಗಿದೆ. ಶುಕ್ರವಾರ ಕೂಡ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.