ಕೂಡ್ಲಿಗಿ: ತಾಲ್ಲೂಕಿನ ಗುಡೇಕೋಟೆ ಗ್ರಾಮದ ಸುತ್ತಮುತ್ತಲ ಗುಡ್ಡಗಳ ಬಳಿ ಇರುವ ಹೊಲಗಳಲ್ಲಿ ಕರಡಿಗಳ ದಾಳಿಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ.ಶನಿವಾರ ರಾತ್ರಿ ಗ್ರಾಮದ ರೈತ ಶಿವಶಂಕರಪ್ಪ ಹೊಲಕ್ಕೆ ದಾಳಿ ಮಾಡಿದ ಮೂರು ಕರಡಿಗಳು ಬೆಳೆದು ನಿಂತ ಮೆಕ್ಕೆಜೋಳವನ್ನು ತಿಂದು, ತುಳಿದು ಸಾಕಷ್ಟು ಹಾನಿ ಮಾಡಿವೆ.
ಗುಡೇಕೋಟೆ ಗ್ರಾಮದ ಸುತ್ತ ಮುತ್ತಲ ಪ್ರದೇಶ ಗುಡ್ಡಗಾಡಿನಿಂದ ಕೂಡಿದ್ದು, ಇಲ್ಲಿ ಕರಡಿಗಳು ಓಡಾಡುವುದು ಹೊಸದೇನಲ್ಲ. ಆದರೆ ಪ್ರತಿ ಸಾರಿ ಅವು ಹೊಲಗಳಿಗೆ ದಾಳಿ ಮಾಡುತ್ತಿದ್ದು ಬೆಳೆಗಳನ್ನು ರಕ್ಷಿಸಿಕೊಳ್ಳು ವುದೇ ಸವಲಾಗಿದೆ. ರಾತ್ರಿಯಾದೊಡನೆ ದಾಳಿ ಮಾಡುವ ಕರಡಿಗಳು ಬೆಳೆಗಳನ್ನೆಲ್ಲ ನಾಶಪಡಿಸಿ ಲಕ್ಷಾಂತರ ರೂ.ಗಳಷ್ಟು ಬೆಳೆ ಹಾನಿಗೆ ಕಾರಣ ವಾಗಿವೆ. ಹೊಲದಲ್ಲಿರುವ ಮೆಕ್ಕೆಜೋಳ ಬೆಳೆಗಳು ನಾಶಗೊಂಡಿವೆ. ಕರಡಿ ಕಾಟಕ್ಕೆ ಬೇಸತ್ತ ರೈತರು ರಾತ್ರಿ ಕಾವಲು ಕಾಯ್ದು ಓಡಿಸಲು ಹೋದರೆ ಸಣ್ಣ ಸಣ್ಣ ಮರಿಗಳನ್ನು ಹೊಂದಿರುವ ಕರಡಿಗಳು ಮರುದಾಳಿ ಮಾಡುತ್ತಿರುವು ದರಿಂದ ರೈತರು ದಿಕ್ಕು ತೋಚದಂತಾಗಿದೆ ಎಂದು ರೈತ ಶಿವಶಂಕರಪ್ಪ ಹೇಳುತ್ತಾರೆ.
ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಕರಡಿಗಳಿದ್ದು, ಯಾವಾಗ ಹೊಲಗಳಿಗೆ ನುಗ್ಗಿ ಬೆಳೆಗಳ ಮೇಲೆ ದಾಳಿ ಮಾಡು ತ್ತವೆ ಎಂಬುದು ತಿಳಿಯದಾಗಿದೆ. ಕರಡಿಗಳ ಹತೋಟಿಗೆ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಾಶವಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕರವೇ ಹೋಬಳಿ ಘಟಕ ಅಧ್ಯಕ್ಷ ಜೆ. ಶಿವಕುಮಾರ ಹಾಗೂ ಅನೇಕ ರೈತರು ಒತ್ತಾಯಿಸಿದ್ದಾರೆ.