ಸಕಲೇಶಪುರ: ಛಾಯಾಗ್ರಾಹಕರು ತಾವು ತೆಗೆಯುವ ಪ್ರತಿ ಚಿತ್ರಗಳು ಗುಣಮಟ್ಟದಲ್ಲಿ ಸ್ಪರ್ಧೆ ಮಾಡಬೇಕು ಎಂದು `ಛಾಯಾ ಚಂದನ' ಪತ್ರಿಕೆ ಸಂಪಾದಕ ರತ್ನಾಕರ್ ಹೇಳಿದರು.
ಮಲೆನಾಡು ವೃತ್ತಪರ ಛಾಯಾಗ್ರಾಹಕರ ಸಂಘದ ವತಿಯಿಂದ ಬುಧವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇರೆಯವರು ತೆಗೆಯುವ ಛಾಯಾಚಿತ್ರಗಳ ಗುಣಮಟ್ಟಕ್ಕಿಂತ, ಅತ್ಯುತ್ತಮ ಗುಣಮಟ್ಟದ ಚಿತ್ರ ತೆಗೆಯಬೇಕು ಎಂಬ ಕಲಿಕೆಯ ಹಸಿವು ಪ್ರತಿಯೊಬ್ಬ ಛಾಯಾಗ್ರಾಹಕರಿಗೂ ಇರಬೇಕು. ತಮ್ಮ ಸೇವೆ ಕೌಶಲದಿಂದ ಗ್ರಾಹಕರನ್ನು ಸೆಳೆಯಬೇಕೇ ಹೊರತು, ಬೆಲೆಯ ಅವೈಜ್ಞಾನಿಕ ಸ್ಪರ್ಧೆಯಿಂದ ಅಲ್ಲ.
ಒಂದೇ ವೃತ್ತಿ ಮಾಡುವವರ ನಡುವೆ ಪ್ರೀತಿ, ವಿಶ್ವಾಸ, ಪರಸ್ಪರ ಸಹಕಾರದ ಕುಟುಂಬ ಸಂಬಂಧ ಬೇಕು ಎಂದರು.
ಸಂಘದ ಅಧ್ಯಕ್ಷ ಕರುಣಾಕರ್ ಮಾತನಾಡಿದರು. ಕಾರ್ಯದರ್ಶಿ ಮಧು, ಆಲೂರು ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನೀಲೇಶ್, ಚಂದ್ರು ಮಳಲಿ ಇದ್ದರು.