ಹೊಸದುರ್ಗ: `ರೈತರು ಉತ್ತಮ ಬೆಳೆ ಬೆಳೆದು, ಆರ್ಥಿಕವಾಗಿ ಪ್ರಗತಿ ಹೊಂದಬೇಕಾದರೆ ಅವರಿಗೆ ಉತ್ತಮ ಬಿತ್ತನೆ ಬೀಜ, ಗೊಬ್ಬರ ಒದಗಿಸಬೇಕು' ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಿತಾ ಬಸವರಾಜು ತಿಳಿಸಿದರು.
ಶುಕ್ರವಾರ ಕೃಷಿ ಇಲಾಖೆ ಸಭಾಂಗಣದಲ್ಲಿ ನಕಲಿ ರಸಗೊಬ್ಬರ ಹಾಗೂ ಕಲಬೆರಕೆ ಬಿತ್ತನೆ ಬೀಜಗಳನ್ನು ಪತ್ತೆ ಹಚ್ಚುವ ಕುರಿತು ಕೃಷಿ ಪರಿಕರಗಳ ಮಾರಾಟಗಾರರಿಗೆ ಅಗತ್ಯ ಮಾಹಿತಿ ನೀಡಲು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಚೆನ್ನಾಗಿ ಮಳೆ ಬರುತ್ತಿರುವುದರಿಂದ, ರೈತರು ಉತ್ತಮ ಬೆಳೆ ಬೆಳೆದು ಬ್ಯಾಂಕ್ನ ಸಾಲವನ್ನು ತೀರಿಸಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ. ರೈತರ ಅಭಿವೃದ್ಧಿಗೆ ಸಹಕರಿಸಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಬೆಂಗಳೂರಿನ ರಸಗೊಬ್ಬರ ನಿಯಂತ್ರಣಾಲಯದ ಕೃಷಿ ಅಧಿಕಾರಿ ಟಿ.ಪಿ.ಕಿರಣ್ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಕಲಿ ರಸಗೊಬ್ಬರ ಹಾಗೂ ಕಲಬೆರಕೆ ಬೀಜಗಳ ಮಾರಾಟಗಾರರು ಅಲ್ಲಲ್ಲಿ ಕಾಣಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ರೈತರು ಎಚ್ಚರಿಕೆವಹಿಸಬೇಕು. ಬೀಜಗೊಬ್ಬರಗಳ ಮಾರಾಟದ ಪರವಾನಗಿ ಪಡೆಯದೆ ಅಕ್ರಮವಾಗಿ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯ ಉಪಯೋಜನಾ ನಿರ್ದೇಶಕ ತಿಪ್ಪೇಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಹಂಸವೇಣಿ, ಕೃಷಿ ಪರಿಕರಗಳ ಮಾರಾಟ ಸಂಘದ ಅಧ್ಯಕ್ಷ ಆಗ್ರೊ ಶಿವಣ್ಣ ಹಾಗೂ ಮಾರಾಟಗಾರರು ಇದ್ದರು.