ಹಾವೇರಿ: `ನೈಸರ್ಗಿಕವಾಗಿ ಉತ್ತಮ ರೀತಿಯಲ್ಲಿ ಪರಾಗಸ್ಪರ್ಶ ಉಂಟಾದಾಗ ಮಾತ್ರ ಉತ್ತಮ ಗುಣಮಟ್ಟದ ಬೀಜೋತ್ಪಾದನೆ ಸಾಧ್ಯವಾಗಲಿದೆ' ಎಂದು ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಡಾ.ಡಿ.ರಾಜಗೋಪಾಲ ಹೇಳಿದರು.
ನಗರದ ನೌಕರರ ಭವನದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ, ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ಹಾಗೂ ರಾಜ್ಯ ಬೀಜ ನಿಗಮದ ಆಶ್ರಯದಲ್ಲಿ ನಡೆದ ಪ್ರಮಾಣಿತ ಬೀಜೋತ್ಪಾದನಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸುದೀರ್ಘ ಬಾಳಿಕೆ ಹಾಗೂ ಉತ್ತಮ ಮೊಳಕೆ ಬರುವ ಬೀಜಗಳನ್ನು ಪ್ರಮಾಣಿತ ಬೀಜಗಳೆಂದು ಪರಿಗಣಿಸಲಾಗುತ್ತದೆ. ಗಂಡು ಹೂವಿನಿಂದ ಹೆಣ್ಣು ಹೂವಿಗೆ ಸಕಾಲದಲ್ಲಿ ವೈಜ್ಞಾನಿಕ ಪರಾಗಸ್ಪರ್ಶ ನಡೆದಾಗ ಮಾತ್ರ ಉತ್ತಮ ಗುಣಮಟ್ಟದ ಬೀಜೋತ್ಪಾದನೆವಾಗಲಿದೆ ಎಂದರು.
ಜೇನುಹುಳುಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಶೇ. 10 ರಿಂದ 15ರಷ್ಟು ಬೆಳೆಯ ಇಳುವರಿ ಬರುತ್ತದೆ. ಈ ಕಾರಣದಿಂದ ಬೀಜೋತ್ಪಾದನೆ ಕಂಪೆನಿಗಳು ಜಮೀನಿನಲ್ಲಿ ಜೇನುಹುಳು ಸಾಕಾಣಿಕೆ ಅಳವಡಿಸಿಕೊಂಡಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹನುಮನಮಟ್ಟಿ ಕೃಷಿ ಕಾಲೇಜಿನ ಡೀನ್ ಡಾ. ವಿ.ಐ.ಬೆಣಗಿ ಮಾತನಾಡಿ, ಬೀಜೋತ್ಪಾದೆನೆಯಲ್ಲಿ ಹಾವೇರಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿತ್ತು. ಇದಿಗ ಐದನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ವಿಜ್ಞಾನಿಗಳಿಗಿಂತ ನುರಿತ ರೈತರಿದ್ದಾರೆ. ಅವರ ಸಮಸ್ಯೆಗಳನ್ನು ನಿವಾರಿಸಿದರೆ, ಬೀಜೋತ್ಪಾದನೆಯಲ್ಲಿ ಪುನಃ ಅಗ್ರಸ್ಥಾನ ತಲುಪುತ್ತದೆ ಎಂದು ತಿಳಿಸಿದರು.
ರೈತರು ಪ್ರಾಮಾಣಿಕ ಹಾಗೂ ವೈಜ್ಞಾನಿಕವಾಗಿ ಬೆಳೆದಿದ್ದೇನೆ ಎಂಬ ಪ್ರಮಾಣ ಮಾಡಿದ ಲೇಬಲ್ ಮತ್ತು ಅಧಿಕಾರಿಗಳು ಉತ್ತಮ ಬೀಜ ಎಂದು ಪರೀಕ್ಷಿಸಿ ಪರಿಗಣಿಸಿರು ಲೇಬಲ್ ಅಂಟಿಸಿದ ಬೀಜಗಳನ್ನು ಮಾತ್ರ ಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ಕೆ.ಜೆ. ದೇವೇಂದ್ರಪ್ಪ, ಧಾರವಾಡ ಕೃಷಿ ವಿವಿಯ ಹಿರಿಯ ತಜ್ಞರಾದ ಡಾ. ಎಂ.ಸಿ.ವಾಲಿ, ಡಾ. ಬಿ.ಎನ್. ಮೋಟಗಿ, ಸಾಯವಯ ವಿಭಾಗದ ಗುಣಮಟ್ಟ ವ್ಯವಸ್ಥಾಪಕ ಟಿ.ಸಿ.ದೇವರಾಜ, ಧಾರವಾಡ ಬೀಜ ಪ್ರಮಾಣದ ಉಪನಿರ್ದೇಶಕ ಎಂ.ಎಂ.ಸಜ್ಜನ, ಸಹಾಯಕ ಕೃಷಿ ನಿರ್ದೇಶಕ ಎಲ್. ಎಚ್.ಪಾಟೀಲ, ಬೀಜ ಪ್ರಮಾಣನ ಅಧಿಕಾರಿ ಜಿ.ಆರ್.ಶಶಿಧರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.