ಶಿವಮೊಗ್ಗ: ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿತು.
ನಗರದ ಶಂಕರ ಮಠ ರಸ್ತೆಯಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ಕೈಗೊಂಡಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.
ಕಾಂಕ್ರೀಟ್ನಲ್ಲಿ ಈಗಾಗಲೇ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಇದರ ಮೇಲೆ ಕಾಂಕ್ರೀಟ್ ಲೈನ್ ಎಳೆದು ಮುಚ್ಚಲಾಗಿದೆ. ಗುಣಮಟ್ಟದ ಕಬ್ಬಿಣ ಬಳಕೆ ಮಾಡದಿರುವ ಕಾರಣ ಹಾಗೂ ಕಾಂಕ್ರೀಟ್ ಮಿಕ್ಸ್ನಲ್ಲಿ ಲೋಪ ಮಾಡಿರುವ ಕಾರಣ ಬಿರುಕು ಉಂಟಾಗಿರುವ ಸಾಧ್ಯತೆ ಇದೆ.
ಈ ಕುರಿತು ಗುಣಮಟ್ಟದ ಪರೀಕ್ಷೆ ನಡೆಸಬೇಕು. ಒಂದು ವೇಳೆ ಕಾಂಕ್ರೀಟ್ ಗುಣಮಟ್ಟ ಸರಿ ಇಲ್ಲದಿದ್ದರೆ, ರಸ್ತೆಯಲ್ಲಿ ಹೊಸದಾಗಿ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್, ಪದಾಧಿಕಾರಿಗಳಾದ ರವಿಶಂಕರ್, ಜನಮೇಜಿರಾವ್, ಎಸ್.ಬಿ. ಅಶೋಕ್ಕುಮಾರ್, ಹಾಲಪ್ಪ ಇದ್ದರು.