ಗಜೇಂದ್ರಗಡ: ಪಾಲಕರು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಅಂದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ತಾ.ಪಂ ಸದಸ್ಯೆ ಲಲಿತಮ್ಮ ಅಣ್ಣಿಗೇರಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೊಟುಮಚಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ನಿರ್ಮಿಸಿದ `ಅಕ್ಷರ ದಾಸೋಹ' ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಹಿಂದುಳಿವಿಕೆಯಲ್ಲಿ ಶಿಕ್ಷಣದ ಕೊರತೆ ತೀವ್ರವಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದರು.
ಶಾಲೆಯ ಮುಖ್ಯೋಪಾಧ್ಯಯ ಎ.ಕೆ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎ.ಎಂ.ವಡಗೇರಿ, ಗ್ರಾ.ಪಂ ಅಧ್ಯಕ್ಷೆ ಸುಮಂಗಲ ಜಗ್ಗಲ, ಎಸ್.ಡಿ.ಎಂ.ಸಿ ಅಧ್ಯಕ್ಷ ಚನ್ನಬಸಪ್ಪ ಗೋಧಿ, ಎಂ.ಡಿ.ಸರಕಾವಸ್, ಕೆ.ಪಿ.ಸಾಲಿಮಠ, ಚಿದಾನಂದ ಬಡಿಗೇರ, ಬಿ.ಟಿ.ಪಾಟೀಲ, ಮಲ್ಲಣ್ಣ ಕಿತ್ತೂರ ಇದ್ದರು. ಎಂ.ಎಸ್.ಹಿರೇಮಠ ಸ್ವಾಗತಿಸಿದರು. ಡಿ.ಎಸ್.ತಳವಾರ ನಿರೂಪಿಸಿದರು. ನೇತ್ರಾವತಿ ಕಟಗೇರಿ ವಂದಿಸಿದರು.