ಬಸವಕಲ್ಯಾಣ: ಭವಿಷ್ಯ ಉತ್ತಮವಾಗಲು ಸರಿಯಾಗಿ ಶಿಕ್ಷಣ ಪಡೆದುಕೊಳ್ಳುವುದು ಅವಶ್ಯಕ ಎಂದು ಉಪನ್ಯಾಸಕ ರುದ್ರೇಶ ಮಠಪತಿ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಥಮಿಕ ಹಂತದಿಂದಲೇ ಸರಿಯಾಗಿ ಓದಿ ಜ್ಞಾನ ಪಡೆದುಕೊಳ್ಳಬೇಕು. ಕಠಿಣ ಪರಿಶ್ರಮ ಪಟ್ಟರೆ ಎಲ್ಲ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದರು. ನಿರ್ಮಲಾ ಶೆಟಗಾರ ಮಾತನಾಡಿ, ವಿದ್ಯಾರ್ಥಿಗಳು ಬಸವಣ್ಣ, ಶಿವಾಜಿ ಮತ್ತು ಸ್ವಾಮಿ ವಿವೇಕಾನಂದ ಅಂಥವರ ಬಗ್ಗೆ ಓದಿ ಪ್ರೇರಣೆ ಪಡೆದುಕೊಳ್ಳಬೇಕು ಎಂದರು.
ಪ್ರಾಚಾರ್ಯ ನಾಗೇಂದ್ರ ಢೋಲೆ ಮಾತನಾಡಿ ಮಕ್ಕಳು ಸುಸಂಸ್ಕೃತ ಆಗಬೇಕು. ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು. ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಡಾ.ಗವಿಸಿದ್ಧಪ್ಪ ಪಾಟೀಲ, ಪುಷ್ಪಾ ಕೋರೆ, ರೈಸೊದ್ದೀನ್, ವಿದ್ಯಾರ್ಥಿಗಳಾದ ಮಿಲಿಂದ, ಚೆನ್ನವೀರ, ಅನುರಾಧಾ, ಅಮೀರ ಮಾತನಾಡಿದರು.
ಈ ಸಂದರ್ಭದಲ್ಲಿ ಕಲಾವಿದ ಮಧುಕರ ಘೋಡಕೆ ಮತ್ತು ಸಂಗಡಿಗರು ಜಾನಪದ ಗೀತೆಯನ್ನು ಹಾಡಿದರು. ಚಿತ್ರಶೇಖರ ಚಿರಳ್ಳಿ, ಡಾ.ಬಲರಾಂ ಹುಡೆ, ಮಲ್ಲಿಕಾರ್ಜುನ ಬಿರಾದಾರ, ದಶವಂತ ಬಂಡೆ ಪಾಲ್ಗೊಂಡಿದ್ದರು. ಶರಣಪ್ಪ ಬಾರಸಿಂಗೆ ನಿರೂಪಿಸಿದರು. ಮಲ್ಲಿಕಾರ್ಜುನ ಹುಣಸಗೇರಾ ವಂದಿಸಿದರು.