ಮಾನ್ವಿ: ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಎಸ್ಎನ್ಎಲ್ ಗುತ್ತಿಗೆ ಕಾರ್ಮಿಕರು ಗುರುವಾರ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಇಲ್ಲಿನ ಬಿಎಸ್ಎನ್ಎಲ್ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಆರಂಭಿಸಿದರು.
ಸರ್ಕಾರದ ಆದೇಶದ ಪ್ರಕಾರ ಗುತ್ತಿಗೆ ಕಾರ್ಮಿಕರನ್ನು ಅರೆ ಕುಶಲಕಾರ್ಮಿಕರೆಂದು ಪರಿಗಣಿಸಿ 1 ಜನವರಿ 2010ರಿಂದ 1 ಮೇ 2011ರ ವರೆಗೆ ಪರಿಷ್ಕೃತ ವೇತನ ನೀಡಬೇಕು. ಕಾರ್ಮಿಕರ ಖಾತೆಯಲ್ಲಿ ಇದುವರೆಗೆ ಕಾರ್ಮಿಕ ಭವಿಷ್ಯ ನಿಧಿ (ಇಎಸ್ಐ) ದಾಖಲೆ ನಮೂದಿಸಿರುವುದಿಲ್ಲ.
ಕೂಡಲೇ ಇದನ್ನು ಸರಿಪಡಿಸಿ ಭವಿಷ್ಯ ನಿಧಿಯನ್ನು ಖಾತೆಯಲ್ಲಿ ಜಮಾ ಮಾಡಬೇಕು. ನಾಲ್ಕು ತಿಂಗಳ ಆರೋಗ್ಯ ನಿಧಿಯನ್ನು ಕೂಡಲೇ ಪಾವತಿಸಬೇಕು. ಪ್ರತಿ ತಿಂಗಳ ವೇತನ 5ನೇ ತಾರೀಖಿನ ಒಳಗೆ ಪಾವತಿಸಬೇಕು. ಕೆಲಸ ಮಾಡುತ್ತಿರುವ ಬಗ್ಗೆ ಅಧಿಕೃತ ವೇತನ ರಸೀದಿ ನೀಡಬೇಕು. ಕಾರ್ಮಿಕರಿಗೆ ಕೂಡಲೇ ಗುರುತಿನ ಚೀಟಿ ವಿತರಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಬಿಎಸ್ಎನ್ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುಚೀಂದ್ರಕುಮಾರ, ಕಾರ್ಯದರ್ಶಿ ದುರೇಂದ್ರ, ಅನಂತಕುಮಾರ, ರಾಮಾರಾವ್, ಮಲ್ಲಿಕಾರ್ಜುನ ಕುರ್ಡಿ, ರಾಜು ಸಿರವಾರ, ಪರಮೇಶ, ಮಲ್ಲಿಕಾರ್ಜುನ, ಪ್ರಕಾಶ, ರಾಮು, ಸೂಗಪ್ಪ, ನರಸಪ್ಪ, ಯಮನಪ್ಪ, ದೇವೇಂದ್ರ, ವೆಂಕಟೇಶ ಧರಣಿಯಲ್ಲಿ ಪಾಲ್ಗೊಂಡಿದ್ದರು.