ಮಂಗಳೂರು: ಸಂಸ್ಥೆಯ ದಿನಗೂಲಿ ಮತ್ತು ಗುತ್ತಿಗೆ ಕಾರ್ಮಿಕರಿಗೆ ಮತ್ತೆ ಕೆಲಸ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಎಸ್ಎನ್ಎಲ್ ನಾನ್ ಪರ್ಮನೆಂಟ್ ವರ್ಕರ್ಸ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕ(ಸಿಐಟಿಯು) ಮಂಗಳವಾರ ನಗರದ ಬಿಎಸ್ಎನ್ಎಲ್ ಪ್ರಧಾನ ಕಚೇರಿ ಎದುರು ಧರಣಿ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಬಿಎಸ್ಎನ್ಎಲ್ ವಿನಿಮಯ ಕೇಂದ್ರ ಮತ್ತು ಕಚೇರಿಗಳಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಹಾಗೂ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕಾರ್ಮಿಕರನ್ನು ಪೂರ್ವಪರ ವಿಚಾರಿಸದೆ ಕೆಲಸದಿಂದ ವಜಾ ಮಾಡಲಾಗಿದೆ. ಬಡ ಕಾರ್ಮಿಕರ ಬದುಕಿನ ಮೇಲೆ ಸವಾರಿ ಮಾಡಲು ಹೊರಟಿರುವ ಅಧಿಕಾರಿಗಳು ಕಾರ್ಮಿಕರ ಕುಟುಂಬಗಳನ್ನು ಬೀದಿಗೆ ತಳ್ಳಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗೀಕರಣ, ಉದಾರೀಕರಣ ನೀತಿಯಿಂದ ಕಾರ್ಮಿಕ ವರ್ಗ ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದೆ. ಸ್ವಾತಂತ್ರ್ಯ ಬಂದು 64 ವರ್ಷ ಕಳೆದರೂ ಕಾರ್ಮಿಕರ ಪರಿಸ್ಥಿತಿ ತೀರಾ ನಿಕೃಷ್ಟವಾಗಿದೆ. ಸರ್ಕಾರಗಳು ಕಾರ್ಮಿಕ ವರ್ಗವನ್ನು ಕಷ್ಟಕ್ಕೆ ದೂಡುತ್ತಿವೆ ಎಂದು ಸಿಐಟಿಯು ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ವಸಂತ್ ಆಚಾರಿ ಆಕ್ರೋಶ ವ್ಯಕ್ತಪಡಿಸಿದರು.
ವಜಾಗೊಳಿಸಿದ ಕಾಮಿಕರ ಮರುನೇಮಕವಾಗಬೇಕು. ಅಧಿಕಾರಿಗಳ ಕಿರುಕುಳ ನಿಲ್ಲಬೇಕು. ಗುತ್ತಿಗೆ ಕಾರ್ಮಿಕರೆಲ್ಲರಿಗೂ ಕಾನೂನುಬದ್ಧ ಸವಲತ್ತು ನೀಡಿ ಕಾಯಂಗೊಳಿಸಬೇಕು. ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಭೀಮಗುಳಿ ಎಚ್ಚರಿಸಿದರು.
ಉಪಾಧ್ಯಕ್ಷ ಮನೋಹರ ನಾರೆಂಬೊಳ್, ಉದಯಕುಮಾರ್ ಅಂಚೇರಿ, ಶ್ರೀಧರ್ ಪುತ್ತೂರು, ರಾಜೇಶ್, ದಿನೇಶ್ ಮತ್ತಿತರರು ಇದ್ದರು.