ಕನಕಪುರ: ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕೆಂಬ ಕಾನೂನು ಜಾರಿಯಲ್ಲಿದ್ದರೂ ಬಹುತೇಕ ಕಡೆ ಕಡಿಮೆ ಸಂಬಳವನ್ನೇ ನೀಡಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ನಳಿನಾ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಪುರಸಭೆ ವತಿಯಿಂದ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿನಗೂಲಿ ನೌಕರರಿಗೆ ಕನಿಷ್ಠ ವೇತನ ನೀಡಬೇಕೆಂಬ ನಿಯಮವಿದ್ದರೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ ಎಂದರು.
ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೂ ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು ಅದನ್ನು ಪ್ರಾಮಾಣಿಕವಾಗಿ ಅವರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು.
ತಾಲ್ಲೂಕು ಪೌರಸೇವಾ ನೌಕರರ ಸಂಘದ ಅಧ್ಯಕ್ಷ ನಾಗರಾಜು ಮಾನತಾಡಿ, ಆಶ್ರಯ ಯೋಜನೆಯಡಿ ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ನಿವೇಶನ ನೀಡಬೇಕು ಎಂದು ಮನವಿ ಮಾಡಿದರು.
ಮುಖ್ಯಾಧಿಕಾರಿ ಮಾಯಣ್ಣಗೌಡ, ಉಪಾಧ್ಯಕ್ಷೆ ನಿರ್ಮಲಾ ಗುಂಡಣ್ಣ, ಸದಸ್ಯ ಆನಂದ್, ಆರೋಗ್ಯ ನಿರೀಕ್ಷಕ ರಾಮಚಂದ್ರ, ಅಧಿಕಾರಿಗಳಾದ ಕಳಂತ್ರಿ, ಬಿ.ಎ. ಶಿವರುದ್ರಯ್ಯ, ಶ್ವೇತಾ ಕಿರಣ್, ಅರ್ಚನಾ, ಹಿರಿಯ ಪೌರ ಕಾರ್ಮಿಕರಾದ ವೆಂಕಟಲಕ್ಷ್ಮಿ, ಸುಬ್ಬಯ್ಯ, ಸೋಮಯ್ಯ, ಅವಾಲ್ರಾಜು, ಪಿ.ರಾಘವ ಸೇರಿದಂತೆ ಅನೇಕರು ಹಾಜರಿದ್ದರು.