ಕೆಂಗೇರಿ: ಅಂಜನಾ ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವಾಗ ಹಾವು ಕಚ್ಚಿದ್ದರಿಂದ ಮೃತಪಟ್ಟ ಗುತ್ತಿಗೆ ಪೌರ ಕಾರ್ಮಿಕ ಎ.ನರಸಿಂಹಯ್ಯ ಅವರ ಶವವನ್ನು ಬಿಬಿಎಂಪಿ ಕಚೇರಿ ಮುಂದೆ ಇಟ್ಟು ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
`ನಾಲ್ಕು ದಿನಗಳ ಹಿಂದೆ ಕಸ ತೆಗೆಯುವಾಗ ನರಸಿಂಹಯ್ಯ ಅವರಿಗೆ ಮಂಡಲದ ಹಾವು ಕಚ್ಚಿತು. ತಕ್ಷಣ ವಿಷಯ ತಿಳಿಸಿದರೂ ಗುತ್ತಿಗೆದಾರರು, ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಯಾರೊಬ್ಬರೂ ಚಿಕಿತ್ಸೆ ಕೊಡಿಸಲು ಬರಲಿಲ್ಲ. ಪರಿಣಾಮ ಚಿಕಿತ್ಸೆ ದೊರಕದೇ ನರಸಿಂಹಯ್ಯ ಮೃತಪಟ್ಟರು~ ಎಂದು ಪ್ರತಿಭಟನಾ ನಿರತ ಪೌರ ಕಾರ್ಮಿಕರು ದೂರಿದರು.
`ಸ್ವಚ್ಛತಾ ಕಾರ್ಯ ಕೈಗೊಳ್ಳುವಾಗ ಧರಿಸಬೇಕಾದ ಸುರಕ್ಷಾ ಕವಚಗಳನ್ನು ನೀಡಿರಲಿಲ್ಲ. ಊರಿನ ಸ್ವಚ್ಛತೆ, ಆ ಮೂಲಕ ನಾಗರಿಕರ ಆರೋಗ್ಯಕ್ಕೆ ಶ್ರಮಿಸುವ ಪೌರ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸರ್ಕಾರ ಇನ್ನಾದರೂ ಪೌರ ಕಾರ್ಮಿಕರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು~ ಎಂದು ಆಗ್ರಹಿಸಿದರು.
ಗುತ್ತಿಗೆ ಪೌರ ಕಾರ್ಮಿಕರ ಸಂಘದ ಕಾರ್ಯದರ್ಶಿ ಗೌರಿ ಮಾತನಾಡಿ, `ಇಂತಹ ದುರ್ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಮೃತರ ಕುಟುಂಬಕ್ಕೆ ಪಾಲಿಕೆ ವತಿಯಿಂದ ಪರಿಹಾರ ನೀಡಬೇಕು. ಇ್ಲ್ಲಲವಾದರೆ ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ~ ಎಂದು ಎಚ್ಚರಿಸಿದರು.
ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.
ಪೌರ ಕಾರ್ಮಿಕರಾದ ಮುನಿಯಮ್ಮ, ಬೋರಯ್ಯ, ಜಯಮ್ಮ, ನಿರ್ಮಲಾ ಇತರರು ಭಾಗವಹಿಸಿದ್ದರು.